ಮಂಡ್ಯ: ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ನ ಅಧ್ಯಕ್ಷ ಎಂ.ವಿನಯ್ಕುಮಾರ್ ಅವರ ೩೬ನೇ ಹುಟ್ಟುಹಬ್ಬದ ಅಂಗವಾಗಿ ಸಮಾಜದ ಒಳಿತಿಗಾಗಿ ೩೬ ಕ್ಕೂ ಹೆಚ್ಚು ರೀತಿಯ ಸೇವಾ ಕಾರ್ಯಗಳ ಮೂಲಕ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಎಲ್ಲರೊಳಗೊಂದಾಗು ವಿನಯ್ ಸ್ನೇಹಬಳಗದ ಸಂಚಾಲಕ ಅರವಿಂದ್ ಪ್ರಭು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೦ ವರ್ಷಗಳಿಂದ ನೂರಾರು ಸಾಮಾಜಿಕ ಕಾರ್ಯಗಳನ್ನು ತಮ್ಮ ಟ್ರಸ್ಟ್ನ ಮೂಲಕ ಮಾಡುತ್ತಾ ಬಂದಿರುವ ವಿನಯ್ಕುಮಾರ್ ಅಪಾರ ಸ್ನೇಹ ಬಳಗವನ್ನು ಹೊಂದಿದ್ದಾರೆ. ಹುಟ್ಟುಹಬ್ಬವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯಲ್ಲಿ ವಿನಯ್ ಅವರ ಸ್ನೇಹ ಬಳಗದ ಗೆಳೆಯರು ಸಮಾಜಸೇವಾ ಕಾರ್ಯಗಳನ್ನು ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದರು.
ವಿನಯ್ ಅವರು ತಮ್ಮ ಸಂತೋಷವನ್ನು ಸಾಮಾಜಿಕ ಕಾಳಜಿಯಿಂದ ಜನರೊಂದಿಗೆ ಹಂಚಿಕೊಂಡು ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಚ್ಐವಿ ಬಾಧಿತ ಮಕ್ಕಳಿಗೆ ಡ್ರೈಫ್ರೂಟ್ಸ್ ವಿತರಣೆ, ವಿಕಲ ಚೇತನರನ್ನು ಪ್ರೋತ್ಸಾಹಿಸುವ ಸೇವಾ ಕಾರ್ಯ, ಸಾವಯವ ಕೃಷಿಕರಿಗೆ ಪ್ರೋತ್ಸಾಹ, ವಚನ ಮತ್ತು ತತ್ವಪದ ಗಾಯನ, ಸಸಿ ನೆಡುವುದು, ಅನ್ನದಾಸೋಹ ಸೇರಿದಂತೆ ಹಲವು ಕಾರ್ಯಕ್ರಮಗಳು ಕಳೆದ ೩ ದಿನದಿಂದ ನಡೆಯುತ್ತಿದ್ದು, ಮುಂದಿನ ೩ ದಿನಗಳು ನಡೆಯಲಿವೆ ಎಂದು ಹೇಳಿದರು.
ಜಿ.ಸಂತೋಷ್ ಮಾತನಾಡಿ, ಈ ಕಾರ್ಯಕ್ರಮಗಳು ಸದುದ್ದೇಶದಿಂದ ಕೂಡಿವೆ. ಇತರರಿಗೂ ಈ ಕಾರ್ಯಕ್ರಮಗಳು ಸ್ಪೂರ್ತಿಯಾಗಲಿದೆ ಎನ್ನುವುದು ಗೆಳೆಯರ ಬಳಗದ ಆಶಯ ಎಂದು ತಿಳಿಸಿದರು.
, ವಿನಯ್ ಅವರು ರಾಜಕೀಯ ಪ್ರವೇಶದ ಹಿನ್ನಲೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಗುಮಾನಿ ಕೇಳಿಬಂದಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರಾಜಕೀಯ ಪ್ರವೇಶ ಮಾಡಿದರೆ ಸ್ನೇಹಬಳಗದ ಎಲ್ಲ ಸಂಘಟನೆಗಳು ಅವರಿಂದ ಹಿಂದೆ ಸರಿಯಲಿವೆ ಎಂದು ಪ್ರತಿಕ್ರಿಯಿಸಿದರು.
ಗೋಷ್ಠಿಯಲ್ಲಿ ಬಳಗದ ಎಚ್.ಪಿ.ವೈರಮುಡಿ ಇದ್ದರು.


