Wednesday, September 17, 2025
spot_img

ಐದು ಪಾಲಿಕೆ ವ್ಯಾಪ್ತಿಯಲ್ಲಿ ಜಯದೇವ ಸ್ಯಾಟಲೈಟ್ ಸೆಂಟರ್ :ಡಾ.ದಿನೇಶ್

ಬೆಂಗಳೂರು: ‘ಹೃದಯ ಸಂಬಂಧಿ ಸಮಸ್ಯೆಗಳಿಗೆ ತುರ್ತಾಗಿ ಚಿಕಿತ್ಸೆ ಒದಗಿಸಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎ) ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಯದೇವ ಸೆಟಲೈಟ್ ಸೆಂಟರ್ ಪ್ರಾರಂಭಿಸುವ ಚಿಂತನೆಯಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನೂತನ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ನಂತರ ಜಯದೇವ ಸಂಸ್ಥೆಗೆ ಭೇಟಿ ನೀಡುವ ಹೃದ್ರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಬೆಂಗಳೂರು ಜನಸಂಖ್ಯೆಯೂ ಹೆಚ್ಚಳವಾಗಿದ್ದು, ಹಾಲಿ ಇರುವ ಆಸ್ಪತ್ರೆಯಲ್ಲಿ ರೋಗಿಗಳ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಯಲಹಂಕ, ಹೊಸೂರು ರಸ್ತೆ ಸೇರಿ ನಗರದ ವಿವಿಧೆಡೆಯಿಂದ ರೋಗಿಗಳು ಜಯನಗರದ ಆಸ್ಪತ್ರೆಗೆ ತಲುಪುವ ವೇಳೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಆದ್ದರಿಂದ ಜಿಬಿಎ ಅಡಿ ಬರುವ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಜಯದೇವ ಸೆಟಲೈಟ್ ಸೆಂಟರ್ ಅಗತ್ಯವಿದೆ. ಇದರಿಂದ ಹೃದ್ರೋಗಿಗಳಿಗೆ ನಿಗದಿತ ಅವಧಿಯೊಳಗೆ ಚಿಕಿತ್ಸೆ ಲಭ್ಯವಾಗಲಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರ ಜತೆಗೂ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಜಯದೇವ ಸೆಟಲೈಟ್ ಸೆಂಟರ್‌ಗಳ ನಿರ್ಮಾಣದಿಂದ ಜಯನಗರದ ಜಯದೇವ ಆಸ್ಪತ್ರೆ ಮೇಲೆ ಒತ್ತಡ ಕಡಿಮೆ ಆಗುತ್ತದೆ. ರೋಗಿಗಳ ನಿರ್ವಹಣೆ ಸುಲಭವಾಗಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಜಯದೇವ ಸೆಂಟರ್‌ಗಳು ತಲಾ ನೂರು ಹಾಸಿಗೆಗಳನ್ನು ಒಳಗೊಂಡರೆ, ಹೊರ ರೋಗಿಗಳ ವಿಭಾಗ ಹಾಗೂ ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಒದಗಿಸಬಹುದಾಗಿದೆ. ಈಗಾಗಲೇ ಪಾಲಿಕೆ ವ್ಯಾ‍ಪ್ತಿಯಲ್ಲಿ ಹಲವು ಆಸ್ಪತ್ರೆಗಳಿದ್ದು, ಕೆಲ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸು ತ್ತಿಲ್ಲ. ಅವುಗಳನ್ನು ಜಯದೇವ ಸಂಸ್ಥೆಗೆ ಹಸ್ತಾಂತರಿಸಿದರೂ ಹೃದ್ರೋಗ ಚಿಕಿತ್ಸಾ ಆಸ್ಪತ್ರೆಯನ್ನಾಗಿ ಪರಿವರ್ತಿಸುತ್ತೇವೆ’ ಎಂದರು.

ವಸತಿ ವ್ಯವಸ್ಥೆ: ‘ಸಂಸ್ಥೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಯ ಜತೆಗೆ ಸಹಾಯಕರೊಬ್ಬರಿಗೆ ಇರಲು ಅವಕಾಶ ನೀಡಲಾಗುತ್ತದೆ. ಹೆಚ್ಚುವರಿ ಸಹಾಯಕರಿಗೆ ಸಂಸ್ಥೆಯಲ್ಲಿ ಎರಡು ‘ಡಾರ್ಮೆಟರಿ’ ನಿರ್ಮಿಸಲಾಗಿದೆ. ಇಲ್ಲಿ 80 ಮಂದಿ ಆಶ್ರಯ ಪಡೆಯಬಹುದಾಗಿದೆ. ಆದರೆ, ಒಳರೋಗಿಗಳು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ, ಎಲ್ಲ ಹೆಚ್ಚುವರಿ ಸಹಾಯಕರಿಗೆ ಆ ಕಟ್ಟಡದಲ್ಲಿ ಆಶ್ರಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಸಂಸ್ಥೆಯ ಇನ್ಫೋಸಿಸ್ ಕಟ್ಟಡದ ಬಳಿ ಇರುವ ಸ್ಥಳಾವಕಾಶದಲ್ಲಿ ಸಹಾಯಕರಿಗಾಗಿ ಬಹುಮಹಡಿ ಕಟ್ಟಡ ನಿರ್ಮಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

‘ಹೃದಯ ಸಂಬಂಧಿ ಸಮಸ್ಯೆಗಳ ಪತ್ತೆಗೆ ಸಂಬಂಧಿಸಿದಂತೆ ಮೆಟ್ರೊ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿಯೂ ಹೃದಯ ತಪಾಸಣೆ ಕೇಂದ್ರಗಳನ್ನು ಪ್ರಾರಂಭಿಸುವ ಚಿಂತನೆಯಿದೆ’ ಎಂದು ತಿಳಿಸಿದರು.

‘ರೊಬೋಟಿಕ್ ಶಸ್ತ್ರಚಿಕಿತ್ಸೆ ಅಳವಡಿಕೆ’

‘ವೈದ್ಯಕೀಯ ಕ್ಷೇತ್ರದಲ್ಲಿ ಪರಿಚಯವಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಕೈಗೆಟಕುವ ದರದಲ್ಲಿ ಚಿಕಿತ್ಸೆ ಒದಗಿಸಲಾಗುವುದು. ಸಂಸ್ಥೆಗೆ ಬರುವ ಹಚ್ಚಿನವರು ಬಡ–ಮಧ್ಯಮ ವರ್ಗದವರಾಗಿದ್ದು, ಅವರಿಗೂ ವೈದ್ಯಕೀಯ ತಂತ್ರಜ್ಞಾನದ ಲಾಭ ಸಿಗುವಂತಾಗಬೇಕು ಎಂಬುದು ನಮ್ಮ ಆಶಯ. ರೊಬೋಟಿಕ್ ಶಸ್ತ್ರಚಿಕಿತ್ಸೆಯನ್ನೂ ಸಂಸ್ಥೆಯಲ್ಲಿ ನಡೆಸಲು ಕ್ರಮವಹಿಸಲಾಗಿದೆ. ಶಸ್ತ್ರಚಿಕಿತ್ಸಕರಿಗೆ ಈ ಬಗ್ಗೆ ತರಬೇತಿ ಒದಗಿಸಿ, ಕಾರ್ಯರೂಪಕ್ಕೆ ತರಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಡಾ.ಬಿ. ದಿನೇಶ್ ತಿಳಿಸಿದರು.

  1. ‘ಸಂಸ್ಥೆಯ ಬೆಂಗಳೂರು ಆಸ್ಪತ್ರೆಗೆ ಭೇಟಿ ನೀಡುವ ಹೊರರೋಗಿಗಳ ಸಂಖ್ಯೆ 2 ಸಾವಿರದ ಗಡಿ ಸಮೀಪಿಸಿದೆ. ಒಳರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಾಲಿ ಇರುವ ಸಿಬ್ಬಂದಿ ರೋಗಿಗಳನ್ನು ನಿರ್ವಹಿಸುತ್ತಿದ್ದು, ಶೇ 15 ರಷ್ಟು ಸಿಬ್ಬಂದಿ ಕೊರತೆಯಿದೆ’ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!