ಖೇಲೊ ಇಂಡ್ಯಾ.ಆಯ್ಕೆಯಾಗಿರುವ ಸ್ಥಳ ಸರಿಯಾ ಕುಮಾರಸ್ವಾಮಿಯವರೆ?
ಮಂಡ್ಯ ಜಿಲ್ಲೆಯ ವಿಸಿ ಫಾರಂ ಕೃಷಿ ಕಾಲೇಜು ಆವರಣದಲ್ಲಿ ಕೃಷಿ ವಿವಿ ಮಂಜೂರಾದ ಬೆನ್ನಲ್ಲೆ ಅದೇ ಆವರಣದಲ್ಲಿ ೧೪ ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲು ಕೇಂದ್ರ ಕ್ರೀಡಾ ಸಚಿವರನ್ನು ಕರೆತರಲಾಗುತ್ತಿದೆ.ಈಗಾಗಲೇ ಸರ್ಕಾರಿ ಪದವಿ ಪೂರ್ವ ಕಾಲೇಜು ಹೈಸ್ಕೂಲ್ ಇರುವ ಸ್ಥಳದಲ್ಲಿ ಕೇಂದ್ರದ ಖೇಲೊ ಇಂಡ್ಯಾ ಯೋಜನೆ ಭಾಗವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಈ ಯೋಜನೆಯನ್ನು ಮಂಡ್ಯಕ್ಕೆ ತಂದಿದ್ದಾರೆ.
ಇದು ಎಷ್ಟರಮಟ್ಟಿಗೆ ಜನರಿಗೆ ಉಪಯೋಗಕ್ಕೆ ಬರಲಿದೆ ಎಂಬುದಕ್ಕೆ ಈಗಾಗಲೇ ತಾಯಿ ಮಕ್ಕಳ ನೂರು ಹಾಸಿಗೆ ಆಸ್ಪತ್ರೆಯೆ ಜೀವಂತ ಸಾಕ್ಷೀಯಾಗಿದೆ.
ಮಂಡ್ಯದಿಂದ ಹತ್ತು ಕಿಲೋಮೀಟರ್ ದೂರದ ಬಿ ಹೊಸೂರು ಬಳಿ ಈ ಆಸ್ಪತ್ರೆ ನಿರ್ಮಿಸಿ ವರ್ಷಗಳೆ ಕಳೆಯಿತು.ಈವರೆಗೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ.ಅಗತ್ಯ ಬಸ್ ಸೌಲಭ್ಯವಿಲ್ಲದೆ ಯಾವುದೆ ಮುಂಗಾಣ್ಕೆ ಇಲ್ಲದೆ ಕೇವಲ ಕಾಮಗಾರಿಯ ಕಮೀಷನ್ ಮೇಲೆ ಕಣ್ಣಿಟ್ಟು ಈ ಆಸ್ಪತ್ರೆ ನಿರ್ಮಿಸಲಾಯಿತು ಎಂಬ ಆರೋಪಗಳಿವೆ.
ಇದರ ಬಗಲಲ್ಲೆ ಇರುವ ಗಾಂಧಿ ಭವನದ ಕತೆಯು ಅದೇ ಆಗಿದೆ.
ಈಗ ಈ ಸರಣಿಗೆ ಕುಮಾರಸ್ವಾಮಿಯವರ ಖೇಲೊ ಇಂಡ್ಯಾ ಹೊಸ ಸೇರ್ಪಡೆಯಷ್ಟೆ ಆಗಿದೆ.
ಮಂಡ್ಯ ಜಿಲ್ಲಾ ಕೇಂದ್ರವಾಗಿ ರೂಪುಗೊಂಡು ೮೫ ವರ್ಷ ಕಳೆದರು ಪೂರ್ಣ ಪ್ರಮಾಣದ ಜಿಲ್ಲಾ ಕೇಂದ್ರವಾಗಿ ಇದು ಅಭಿವೃದ್ದಿಯಾಗಲಿಲ್ಲ.ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳ ದೂರದೃಷ್ಟಿ ಕೊರತೆ ಮತ್ತು ಲಾಭಕೋರತನ ಎಂದರೆ ತಪ್ಪಾಗಲಾರದು.
ಸರಕಾರಿ ಸ್ವಾಮ್ಯದ ಸಿನಿಮಾ ರೀಲು ತಯಾರಿಸುವ ಅಸಿಟೇಟ್ ಕಾರ್ಖಾನೆ ಮುಚ್ಚಿ ಅದರ ೧೨೫ ಎಕರೆ ಭೂಮಿಯನ್ನು ಖಾಸಗಿ ಬಿಲ್ಡರ್ ಗಳ ಪಾಲಾಗಿಸಲಾಯಿತು.
ಮಂಡ್ಯ ಕೆರೆ ಒಣಗಿಸಿ ಭರ್ತಿ ನಾಲ್ಕುನೂರು ಎಕರೆ ಭೂಮಿಯಲ್ಲಿ ಜಿಲ್ಲಾ ಕೇಂದ್ರಕ್ಕೆ ಅಗತ್ಯ ಭೂಮಿ ಮೀಸಲು ಮಾಡಿಕೊಳ್ಳಲಿಲ್ಲ.
ಈಗ ಇರುವ ಸ್ಥಳಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯಾವುದೇ ಪ್ರಯತ್ನವಿಲ್ಲದೆ ನಗರವನ್ನು ಅಡ್ಡಾದಿಡ್ಡಿಯಾಗಿಸಲಾಗುತ್ತಿದೆ.
ಬಹುನಿರೀಕ್ಷೆಯ ಯಾವುದೆ ಕಾರ್ಖಾನೆ ಜಿಲ್ಲೆಗೆ ಬರಲಿಲ್ಲ.ಎರಡು ವರ್ಷ ಎರಡು ಪಕ್ಷಗಳು ಭೂಮಿಯ ವಿಚಾರದಲ್ಲೆ ಅಗ್ಗದ ಟೀಕೆ ಟಿಪ್ಪಣಿಯಲ್ಲಿ ತೊಡಗಿಕೊಂಡವು.
ಗ್ರಾಮೀಣಾ ಭಾಗದಲ್ಲು ಅಗತ್ಯ ಕ್ರೀಡಾ ಸೌಕರ್ಯ ಎಂಬ ನಿಲುವು ಸರಿಯಾದುದಾದರೂ ಅದರ ಬಳಕೆ ದೃಷ್ಟಿಯಿಂದ ಅದರ ಆರಂಭ ನಗರದಲ್ಲೆ ಆಗಬೇಕಿದೆ.
.ಅದಕ್ಕಾಗಿ ಮಂಡ್ಯ ಸಕ್ಕರೆ ಕಾರ್ಖಾನೆಗೆ ಸೇರಿದ ಕ್ರೀಡಾಂಗಣ ಅದಕ್ಕೆ ಹೊಂದಿಕೊಂಡಂತೆ ಏಳೆಂಟು ಎಕರೆ ಭೂಮಿ ಇದೆ.ಅದರಲ್ಲಿ ಖೇಲೊ ಇಂಡ್ಯಾ ಯೋಜನೆ ಜಾರಿಗೊಳಿಸಬಹುದು.
ಇದರಿಂದ ನಗರದ ಸಾವಿರಾರು ಜನರಿಗೆ ಮಾತ್ರವಲ್ಲದೆ ಗ್ರಾಮೀಣಾ ಭಾಗಕ್ಕು ಅನುಕೂಲವಾಗಲಿದೆ.
ಸರಕಾರಿ ಯೋಜನೆಗಳು ಜನರ ಅನುಕೂಲಕ್ಕಾಗಿ ರೂಪುಗೊಳ್ಳಬೇಕೆ ವಿನಾ ಅಧಿಕಾರಿಗಳು ಜನಪ್ರತಿನಿಧಿಗಳ ಗುತ್ತಿಗೆ ಏಜೆನ್ಸಿಗಳ ಅನುಕೂಲಕ್ಕಾಗಿ ಅಲ್ಲ.
ಈಗಲೂ ಕಾಲ ಮಿಂಚಿಲ್ಲ.ಕುಮಾರಸ್ವಾಮಿ ಮತ್ತು ರಾಜ್ಯ ಸರ್ಕಾರ ಯೋಜನೆಯ ಸ್ಥಳವನ್ನು ನಗರಕ್ಕೆ ವರ್ಗಾಯಿಸಲಿ.ಸಾವಿರಾರು ಜನರ ಅನುಕೂಲಕ್ಕೆ ಬಳಕೆಗೆ ಬರುವಂತೆ ಮಾಡಲಿ.ಇದರಲ್ಲಿ ಯಾವುದೇ ರಾಜಕೀಯ ಪಕ್ಷ ಕ್ಷುಲ್ಲಕ ರಾಜಕಾರಣ ಮಾಡದಿರಲಿ.


