ಮಂಡ್ಯ: ಮದ್ದೂರಿನ ಅಭಿವೃದ್ಧಿ ಕಾಮಗಾರಿಗಳು ತಮ್ಮ ಕನಸಿನ ಕೂಸೆಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೊಂಡಿದ್ದು, ಈ ಸಂಬಂಧ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಅವರ ಸವಾಲು ಸ್ವೀಕರಿಸಿದ್ದೇವೆ. ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘದ ಆವರಣದಲ್ಲಿ ಪತ್ರಕರ್ತರ ಸಮ್ಮುಖದಲ್ಲೇ ಚರ್ಚೆ ಮಾಡೋಣ ಎಂದು ಕಾಂಗ್ರೆಸ್ ಕಿಸಾನ್ ಮೋರ್ಚಾದ ಜಿಲ್ಲಾಧ್ಯಕ್ಷ ಮೋಹನ್ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ದೂರು ಶಾಸಕ ಕೆ.ಎಂ.ಉದಯ್ ಅವರು ಮದ್ದೂರು ತಾಲೂಕಿಗೆ ೧೨೦೦ ಕೋಟಿ ರೂ.ಗಳ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ್ದು, ಇನ್ನೂ ೯೦೦ ಕೋಟಿ ಅನುದಾನದ ಪ್ರಸ್ತಾವನೆ ಅನುಮೋದನೆಯ ಹಂತದಲ್ಲಿದೆ ಎಂದರು.
೪೮೪ ಕೋಟಿ ವೆಚ್ಚದ ನಾಲೆ ಆಧುನೀಕರಣ, ೧೮೭ ಕೋಟಿ ರೂ ವೆಚ್ಚದ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿಗಳು ನನ್ನದು ಎಂದು ಸಚಿವರು ಹೇಳಿದ್ದಾರೆ. ಈ ಸಂಬಂಧ ಉದಯ್ ಅವರು ಮಂಜೂರಾತಿ ಪತ್ರ ಪಡೆದಿದ್ದಾರೆ. ಈಗ ಯಾರಿಗೆ ನಾಚಿಕೆಯಾಗಬೇಕು ಎಂದು ಪ್ರಶ್ನಿಸಿದರು.
ಕೆ.ಎಂ.ದೊಡ್ಡಿಯಿಂದ ಮದ್ದೂರು ನಗರಕ್ಕೆ ಕುಡಿಯುವ ನೀರೊದಗಿಸುವ ಕಾಮಗಾರಿಗೆ ಅವರ ಅವಧಿಯ ೨೦೨೧ರಲ್ಲಿ ೧೦ ಕೋಟಿ ಮಂಜೂರಾಗಿತ್ತು. ಅವರ ಅವಧಿಯಲ್ಲಿ ರಸ್ತೆ ಮೇಲೆ ಕಾಮಗಾರಿಯ ಪೈಪ್ ಹಾಕಿಸಿ ೫ ಕೋಟಿ ರೂ. ಗುತ್ತಿಗೆದಾರನ ಹೆಸರಿಗೆ ಬಿಲ್ ಮಾಡಿದ್ದಾರೆ. ಈಗ ಆ ಪೈಪ್ಗಳು ಕಳಪೆ ಎಂದು ವರದಿ ನೀಡಿದ್ದಾರೆ. ಈಗ ೫ ಕೋಟಿ ನಷ್ಟಕ್ಕೆ ಹೊಣೆಯಾರೆಂದು ಪ್ರಶ್ನಿಸಿದರು.
ಸೂಳೆಕೆರೆ ಹೂಳೆತ್ತುವ ಕಾಮಗಾರಿಯ ಮಣ್ಣಿಗೆ ೩೫೦೦ ರೂ ಪಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅದನ್ನು ತೆರವು ಗೊಳಿಸುವ ಸಲುವಾಗಿ ಸುತ್ತಮುತ್ತಲ ರೈತರು ತಮಗೆ ಬೇಕಾದ ಹಾಗೆ ಉಚಿತವಾಗಿ ಕೊಂಡೊಯ್ಯಲು ಅನುಮತಿ ನೀಡಲಾಗಿದೆ. ಅದನ್ನು ಸಾಗಿಸಲು ರೈತರು ವಾಹನ ವೆಚ್ಚ ಭರಿಸಿಕೊಳ್ಳುತ್ತಿದ್ದಾರೆ ಹೊರತು ಯಾರಿಗೂ ಮಾರಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಅವರು ಶಾಸಕ ಉದಯ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿರುವವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ಹರೀಶ್, ಚಲುವರಾಜು, ರಾಮಕೃಷ್ಣ ಇತರರಿದ್ದರು.


