ಬೂದನೂರು ವಸತಿರಹಿತರ ಮನೆ ನಿರ್ಮಾಣಕ್ಕೆ ಶಾಸಕ ರವಿಕುಮಾರ್ ಚಾಲನೆ
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಆರು ತಿಂಗಳೊಳಗೆ ನಿವೇಶನರಹಿತರಿಗೆ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದೆಂದು ಶಾಸಕ ಗಣಿಗ ರವಿಕುಮಾರ್ ಘೋಷಿಸಿದರು.
ಮಂಡ್ಯ ಕಸಬಾದ ಹಳೇ ಬೂದನೂರು ಗ್ರಾಮದಲ್ಲಿ ನಿವೇಶನರಹಿತರಿಗೆ ಹಂಚಿಕೆ ಮಾಡಿರುವ ಆಶ್ರಯ ನಿವೇಶನ ಸಂಕಿರ್ಣದಲ್ಲಿ ಮನೆಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮನೆಯನ್ನು ಸಹ ನೀಡಿಲ್ಲ.ಕಾರಣ ಮನೆಗಳ ನಿರ್ಮಾಣಕ್ಕೆ ಸರಕಾರ ನೀಡುವ ಅನುದಾನ ಒಂದು ಕಾಲು ಲಕ್ಷ ರೂಪಾಯಿ ಹಣದಲ್ಲಿ ೨೦ ಸಾವಿರ ಜಿಎಸ್ ಟಿ ಹಣ ಕೇಂದ್ರಕ್ಕೆ ಹೋಗುತ್ತದೆ.ಇನ್ನುಳಿದ ಒಂದು ಲಕ್ಷದಲ್ಲಿ ಯಾವುದೇ ಮನೆ ನಿರ್ಮಾಣ ಸಾಧ್ಯವಿಲ್ಲ. ಸರಕಾರ ಈಗ ಪ್ರತಿ ಮನೆಗೆ ಮೂರುವರೆ ಲಕ್ಷ ರೂಪಾಯಿ ಅನುದಾನ ಕೊಡಲು ಒಪ್ಪಿದೆ.ಕ್ಷೇತ್ರದ ನಿವೇಶನರಹಿತರಿಗೆ ಮನೆಗಳನ್ನು ನೀಡುವ ಸಲುವಾಗಿ ತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಜತೆ ನಿರಂತರ ಸಭೆಗಳನ್ನು ನಡೆಸಿ ಸರಕಾರಿ ಭೂಮಿಗಳನ್ನು ಗುರುತಿಸಲಾಗಿದೆ.ಈ ಪ್ರಕ್ರಿಯೆ ಮುಗಿದ ನಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಸಾವಿರ ನಿವೇಶನಗಳನ್ನು ವಿತರಿಸಲಾಗುವುದು ಎಂದರು.
ಹಲ್ಲೇಗರೆಯಲ್ಲಿ ೧೫೫ ನಿವೇಶನಗಳನ್ನು ಮುಂದಿನ ಒಂದು ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು.ಬೂದನೂರು ನಿವೇಶನರಹಿತರಿಗೆ ಈಗಾಗಲೇ ೫೦ ಹಕ್ಕು ಪತ್ರಗಳನ್ನು ನೀಡಲಾಗಿದ್ದು.ಫೆಬ್ರವರಿಯಲ್ಲಿ ನಡೆಯುವ ಬೂದನೂರು ಉತ್ಸವದಲ್ಲಿ ಬಾಕೀ ಹಕ್ಕು ಪತ್ರಗಳನ್ನು ವಿತರಿಸಲಾಗುವುದು.ಹೆದ್ದಾರಿಯಿಂದ ಆಶ್ರಯ ಕಾಲೋನಿಯ ಸಂಪರ್ಕ ರಸ್ತೆಗೆ ೫೦ ಲಕ್ಷ ಹಾಗೂ ಗ್ರಾಮೀಣಾಭಿವೃದ್ಧಿ ನಿಧಿಯಿಂದ ಆಶ್ರಯ ಬಡಾವಣೆಯ ರಸ್ತೆ ಕುಡಿಯುವ ನೀರು ಬೀದಿ ದೀಪಕ್ಕಾಗಿ ೨೫ ಲಕ್ಷ ರೂಗಳನ್ನು ಮೊದಲ ಹಂತವಾಗಿ ಬಿಡುಗಡೆ ಮಾಡಲಾಗುವುದೆಂದು ಘೋಷಿಸಿದರು.
ಮಂಡ್ಯ ನಗರದಲ್ಲಿ ಕಳೆದ ೫೦ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೊಳಗೇರಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡಲಾಗುವುದು.ಈಗಾಗಲೇ ನ್ಯೂ ತಮಿಳು ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ್ದು.ಮುಂದಿನ ಫೆಬ್ರವರಿಯಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಒಂದು ಸಾವಿರ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗುವುದೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ. ಆಶ್ರಯ ಭೂಮಿಯ ಸಿವಿಲ್ ವ್ಯಾಜ್ಯಗಳ ತೊಡಕಿನಿಂದ ವಸತಿರಹಿತರಿಗೆ ಸಾಕಷ್ಟು ಅನಾನೂಕೂಲವಾಗಿದ್ದು.ವ್ಯಾಜ್ಯಗಳ ಇತ್ಯರ್ಥಕ್ಕೆ ಅಗತ್ಯ ಸೂಚನೆ ನೀಡಬೇಕು.ಹಳೇ ಬೂದನೂರು ಆಶ್ರಯ ಬಡಾವಣೆಯನ್ನು ಮಾದರಿ ಬಡಾವಣೆಯಾಗಿ ರೂಪಿಸುವಂತೆ ಕೋರಿದರು.ಸ್ಥಳದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡ ಬಿ.ಟಿ ಚಂದ್ರಶೇಖರ ತಾವು ಹೂಡಿರುವ ಸಿವಿಲ್ ಮೊಕದ್ದಮೆ ಹಿಂಪಡೆಯುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಸ್ವಂತ ಮನೆ ನಮ್ಮ ಹಕ್ಕು ಸಂಘಟನೆಯ ಸತೀಶ್ ಬಿ.ಕೆ. ಸವಿತಾ ಬಿ.ಸುನೀಲ್.ಕರುನಾಡ ಸೇವಕರು ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಎನ್ ಚಂದ್ರು.ಪರಿವರ್ತನಾ ಸಂಘಟನೆಯ ಟಿ.ಡಿ.ನಾಗರಾಜು.ಭೀಮ್ ಆರ್ಮಿಯ ಜೆ.ರಾಮಯ್ಯ.ಹನಕೆರೆ ಗಂಗರಾಜ್.ವಕೀಲ ಬಿ.ಟಿ ವಿಶ್ವನಾಥ್.ರೈತಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್.ಬೂದನೂರು ಪುಟ್ಟಸ್ವಾಮಿ.ಶಿವಳ್ಳಿ ಚಂದ್ರು.ಯುವ ಕಾಂಗ್ರೆಸ್ ಮುಖಂಡ ಎಂ.ಎಸ್ ಚಿದಂಬರ.ಬಿ.ಸಿ ಸೋಮಶೇಖರ.ಮಧು.ಶಿವು ಮೊದಲಾದವರಿದ್ದರು.


