ಮೈಶುಗರ್ ಬಾಯ್ಲರ್ ಗೆ ೬೦ ಕೋಟಿ:ಸಿ.ಡಿ.ಗಂಗಾಧರ್ ಶ್ಲಾಘನೆ
ರಾಜ್ಯ ಸಚಿವ ಸಂಪುಟವು ಮಂಡ್ಯ ಮೈಶುಗರ್ ನಲ್ಲಿ ಬಾಯ್ಲರ್ ಅಳವಡಿಸಲು ಸಂಪುಟದಲ್ಲಿ ೬೦ ಕೋಟಿ ಘೋಷಿಸಿರುವ ನಿರ್ಧಾರವನ್ನು ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಶ್ಲಾಘಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು.ಮೈಶುಗರ್ ಉನ್ನತಿಗಾಗಿ ಕಾಂಗ್ರೆಸ್ ಸರಕಾರ ಈವರಗೆ ೧೭೩ ಕೋಟಿ ಬಿಡುಗಡೆ ಮಾಡಿದೆ.ಮಂಡ್ಯ ಜಿಲ್ಲೆಯ ಅಭಿವೃದ್ದಿಗಾಗಿ ಕೃಷಿ ವಿವಿ ತರಲಾಗಿದೆ.ಮೈಶುಗರ್ ಕಾರ್ಖಾನೆಯಲ್ಲಿ ಬಾಯ್ಲರ್ ಅಳವಡಿಸಲು ಜಿಲ್ಲೆಯ ಜನಪ್ರತಿನಿಧಿಗಳು ತೀವ್ರ ಒತ್ತಡ ಹೇರಿದ ಪರಿಣಾಮವಾಗಿ ಹಣ ನೀಡಲು ಸರಕಾರ ಒಪ್ಪಿದೆ ಎಂದರು.
ಈಗ ರಾಜ್ಯ ಸರಕಾರ ನೀಡುತ್ತಿರುವ ಹಣ ಸಾಲವೇ ಇಲ್ಲವೆ ಅನುದಾನವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯ ಸರಕಾರ ಘೋಷಿಸಿರುವ ಹಣ ಸಾಲ ಇಲ್ಲವೆ ಅನುದಾನವೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎಂದು ಉತ್ತರಿಸಿದರು.
ಮೈಶುಗರ್ ಕಾರ್ಖಾನೆಗೆ ಸೇರಿದ ಭೂಮಿಯ ಒತ್ತುವರಿ ತೆರವುಗೊಳಿಸಲು ಕಂದಾಯ ಮಂತ್ರಿಯವರನ್ನು ಕೋರಲಾಗಿದೆ.ಈ ಸಂಬಂದ ಅಗತ್ಯ ಆದೇಶ ಹೊರಡಿಸಲಾಗುವುದು.
ಈ ಹಿಂದಿನ ಸರಕಾರದ ಅವಧಿಯಲ್ಲಿ ಕಬ್ಬು ನುರಿಸಲು ಆರ್ ಬಿ ಟೆಕ್ ಕಂಪನಿಗೆ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ನಾಲ್ಕುವರೆ ಕೋಟಿ ರೂಪಾಯಿ ಹೆಚ್ಚುವರಿ ಪಾವತಿಸಿದ್ದು ಅದನ್ನು ಮರು ವಸೂಲು ಮಾಡಲು ಕೈಗೊಂಡಿರುವ ಕ್ರಮದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಆರ್ ಬಿ ಟೆಕ್ ಗೆ ನಾವು ನೀಡಬೇಕಿರುವ ಹಣದಲ್ಲಿ ಕಟಾಯಿಸಿ ಹೆಚ್ಚುವರಿ ಮೊತ್ತವನ್ನು ಮುರಿದುಕೊಳ್ಳಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಈ ಹಿಂದೆ ಆಗಿರುವ ಸಣ್ಣ ಪುಟ್ಟ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಯಶಸ್ವಿಯಾಗಿ ಮೈಷುಗರ್ ಕಾರ್ಖಾನೆಯನ್ನು ನಡೆಸುವುದಕ್ಕೆ ನಮ್ಮ ಸರ್ಕಾರ ಹಾಗೂ ನಮ್ಮ ನಾಯಕರುಗಳು ಜವಾಬ್ದಾರರಾಗಿರುತ್ತಾರೆ ಎಂದ ಅವರು, ಬಹಳ ಮುಖ್ಯವಾಗಿ 2004 ರಲ್ಲಿ ಬಹಳ ಸಂಕಷ್ಟದಲ್ಲಿದ ಸಕ್ಕರೆ ಕಾರ್ಖಾನೆಯನ್ನು ಉಸ್ತುವಾರಿ ಸಚಿವರು ಆದ ಚಲುವರಾಯಸ್ವಾಮಿಯವರು ಹಾಗೂ ಅಂದಿನ ಮುಖ್ಯಮಂತ್ರಿಗಳಾದ ಧರಂಸಿಂಗ್ ಮತ್ತು ಉಪಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕೋಟ್ಯಾಂತರ ರೂಪಾಯಿ ನೀಡಿ ಕಾರ್ಯಾರಂಭವಾಗುವಂತೆ ಮಾಡಿದರು ಎಂದು ಸ್ಮರಿಸಿದರು.
ಸರ್ಕಾರದ ಆದೇಶದಂತೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಂಪನಿಯ ಹೆಚ್ಚುವರಿ ರೂ.50.00ಗಳನ್ನು ನೀಡಲು ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೋಹನ್ ಕುಮಾರ್ ದೇಶಹಳ್ಳಿ, ಅಜ್ಜಂಪುರ ರಾಮಕೃಷ್ಣ, ನಾಗರಾಜು, ನಹಿಂ, ಬೋರೇಗೌಡ, ಚಂದ್ರಶೇಖರ್, ಶ್ರೀಧರ್ ಹಾಗೂ ಚಂದಗಾಲು ವಿಜಯ್ ಕುಮಾರ್ ಉಪಸ್ಥಿತರಿದ್ದರು.


