ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಪ್ರಕಟ
ನವದೆಹಲಿ : ಆಡಳಿತಾರೂಢ ಕಾಂಗ್ರೆಸ್ ಹಾಗೂ ಎನ್ಡಿಎ ಮೈತ್ರಿಕೂಟ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನವಂಬರ್ 13 ರಂದು ಮತದಾನ ನಡೆದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಮನಗರ ಜಿಲ್ಲೆಯ 185-ಚನ್ನಪಟ್ಟಣ, ಹಾವೇರಿ ಜಿಲ್ಲೆಯ 83-ಶಿಗ್ಗಾವಿ ಮತ್ತು ಬಳ್ಳಾರಿ ಜಿಲ್ಲೆಯ 95- ಸಂಡೂರು (ಎಸ್.ಟಿ ಮೀಸಲು ಕ್ಷೇತ್ರ) ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಅಕ್ಟೋಬರ್ 15 ರ ಮಂಗಳವಾರ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು.
ನವೆಂಬರ್ 13 ರಂದು 3 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದು ನವೆಂಬರ್ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
*ಉಪ ಚುನಾವಣೆ ವೇಳಾಪಟ್ಟಿ ಇಂತಿದೆ.*
* ಚುನಾವಣಾ ಗೆಜೆಟ್ ನೋಟೀಫಿಕೇಷನ್ ಪ್ರಕಟಣಾ ದಿನಾಂಕ : 18-10-2024 ರ ಶುಕ್ರವಾರ
* ನಾಮಪತ್ರ ಸಲ್ಲಿಕೆ ಕೊನೆ ದಿನಾಂಕ:25-10-2024 ರ ಶುಕ್ರವಾರ.
* ನಾಮಪತ್ರ ಪರಿಶೀಲನೆ ದಿನಾಂಕ: 28-10-2024 ರ
ಸೋಮವಾರ
* ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ: 30-10-2024 ರ ಬುಧವಾರ.
* ಮತದಾನ ದಿನಾಂಕ :
13-11-2024 ರ ಬುಧವಾರ
* ಮತ ಎಣಿಕೆ ದಿನಾಂಕ: 23-11-2024 ರ ಶನಿವಾರ.
* ಚುನಾವಣೆ ಪ್ರಕ್ರಿಯೆ ಕೊನೆಗೊಳ್ಳುವ ದಿನಾಂಕ:25-11-2024 ರ ಸೋಮವಾರ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದರಾದ ಬಸವರಾಜ ಬೊಮ್ಮಾಯಿ ಮತ್ತು ಇ.ವಿ.ತುಕಾರಾಂ ಅವರುಗಳು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ತೆರವಾದ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ದೇಶದ 15 ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ 2 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಈ ಪೈಕಿ ಕೇರಳ ರಾಜ್ಯದ 4-ವೈನಾಡ್ ಲೋಕಸಭಾ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿರುವುದರಿಂದ ತೆರವಾದ ಕ್ಷೇತ್ರಕ್ಕೆ ಮತ್ತು ಮಹಾರಾಷ್ಟ್ರದ 16-ನಾಂದೇಡ್ ಲೋಕಸಭಾ ಕ್ಷೇತ್ರದ ಎಂಪಿ ಯಾಗಿದ್ದ ಚೌವ್ಹಾಣ್ ವಸಂತರಾವ್ ಬಲವಂತರಾವ್ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.