ಮೃತ ನೌಕರರ ಕುಟುಂಬಕ್ಕೆ ಅನುಕಂಪ ನೇಮಕಾತಿ: ಒಂದು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸಿಇಒ ಸೂಚನೆ
ಮಂಡ್ಯ:ಮೃತ ನೌಕರರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಕುರಿತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಂದಿನಿ ಕೆ.ಆರ್. ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಸಭೆ ನಡೆಯಿತು.
ಯಾವುದೇ ಸಿಬ್ಬಂದಿ ಮೃತಪಟ್ಟಲ್ಲಿ ನಿಗದಿತ ಕಾಲಮಿತಿಯೊಳಗೆ ಸರ್ಕಾರದ ಆದೇಶ ಹಾಗೂ ಸುತ್ತೋಲೆ ಮಾರ್ಗಸೂಚಿಗಳನ್ವಯ ಅವಲಂಬಿತರಲ್ಲಿ ಯಾರು ಅರ್ಹರಾಗಿರುತ್ತಾರೋ ಅವರ ಜ್ಯೇಷ್ಠತಾ ಪಟ್ಟಿಯ ಪ್ರಕಾರ ಕ್ರಮ ವಹಿಸುವಂತೆ ಸೂಚಿಸಿದರು. ಅನುಕಂಪದ ಆಧಾರದ ಮೇಲೆ ವಿದ್ಯಾರ್ಹತೆಗೆ ಅನುಗುಣವಾಗಿ ಒಂದು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪೋಸ್ಟಿಂಗ್ ನೀಡುವಂತೆ ತಿಳಿಸಿದರು.
ಫೆಬ್ರವರಿ 2025ರಿಂದ ಪ್ರಸ್ತುತ ಸಾಲಿನವರೆಗೆ ಅನುಕಂಪ ಆಧಾರಿತ ನೇಮಕಾತಿಗೆ ಸಂಬಂಧಿಸಿದಂತೆ ಒಟ್ಟು 16 ಪ್ರಸ್ತಾವನೆಗಳು ಬಾಕಿ ಇದ್ದವು. ಇದುವರೆಗೆ 23 ಜನರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲಾಗಿದ್ದು, ಇನ್ನೂ 13 ಪ್ರಸ್ತಾವನೆಗಳು ಬಾಕಿ ಇರುವುದಾಗಿ ತಿಳಿಸಿದರು.
ಸಭೆಯಲ್ಲಿ ಒಟ್ಟು 18 ಪ್ರಸ್ತಾವನೆಗಳು ಬಂದಿದ್ದು, ಅವುಗಳಲ್ಲಿ 6 ಪ್ರಸ್ತಾವನೆಗಳು ಕ್ರಮಬದ್ಧವಾಗಿದ್ದ ಕಾರಣ ಅನುಮೋದನೆ ನೀಡಲಾಗಿದೆ. 2 ಪ್ರಸ್ತಾವನೆಗಳಿಗೆ ಹೆಚ್ಚಿನ ಮಾಹಿತಿ ಅಗತ್ಯವಿರುವುದರಿಂದ ಕಾಯ್ದಿರಿಸಲಾಗಿದ್ದು, 10 ಪ್ರಸ್ತಾವನೆಗಳು ಅಪೂರ್ಣವಾಗಿರುವುದರಿಂದ ಅವುಗಳನ್ನು ಹಿಂತಿರುಗಿಸಲು ಸಮಿತಿಯು ತೀರ್ಮಾನಿಸಿದೆ ಎಂದು ತಿಳಿಸಿದರು. ಅಪೂರ್ಣ ಪ್ರಸ್ತಾವನೆಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ ಮರುಸಲ್ಲಿಸುವಂತೆ ಸಿಇಒ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಪ್ರಕ್ರಿಯೆಯ ಮುಖ್ಯ ಹೊಣೆಗಾರಿಕೆ ಪಿಡಿಒಗಳು, ತಾಲೂಕು ಪಂಚಾಯಿತಿಯ ಅಧೀಕ್ಷಕರು ಹಾಗೂ ಇಒಗಳದ್ದಾಗಿರುತ್ತದೆ ಎಂದು ಹೇಳಿದರು.
ಅನುಕಂಪದ ಆಧಾರದ ಮೇಲೆ ಉದ್ಯೋಗಕ್ಕೆ ಅನುಮೋದನೆ ಪಡೆದ 6 ಜನರಿಗೆ ನಾಳೆ ನೇಮಕಾತಿ ಪತ್ರ ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಂದಿನಿ ಕೆ.ಆರ್. ತಿಳಿಸಿದರು.
ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ., ಉಪಕಾರ್ಯದರ್ಶಿ (ಆಡಳಿತ) ಶಿವಲಿಂಗಯ್ಯ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಉಪಸ್ಥಿತರಿದ್ದರು


