ಜಿಲ್ಲಾಸ್ಪತ್ರೆ ಉದ್ಯಾನದಲ್ಲಿ ಕಟ್ಟಡ ನಿರ್ಮಾಣ ಸ್ಥಗಿತಕ್ಕೆ ಸಮ್ಮತಿ
ಮಂಡ್ಯ: ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಉದ್ಯಾನದಲ್ಲಿ ಹಿರಿಯ ನಾಗರೀಕರ ಚಿಕಿತ್ಸಾ ಕೇಂದ್ರದ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮೋಹನ್ ಸಮ್ಮತಿ ಸೂಚಿಸಿದ್ದಾರೆ.
ಆಸ್ಪತ್ರೆಯ ಉದ್ಯಾನದಲ್ಲಿ ಕಟ್ಟಡ ನಿರ್ಮಾಣ ವಿರೋಧಿಸಿ ಕನ್ನಡ ಸಂಘಟನೆಗಳು ಆಕ್ಷೇಪಣೆ ವ್ಯಕ್ತಪಡಿಸಿ ಇಂದು ಮೆಡಿಕಲ್ ಸೂಪರಿಂಟೆಂಡೆಂಟ್ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಮಾತನಾಡಿದ ಪ್ರತಿಭಟನಾಕಾರರು ಮೆಡಿಕಲ್ ಕಾಲೇಜು ಕ್ಯಾಂಪಸ್ ಈಗಾಗಲೇ ಕಿಷ್ಕಿಂಧವಾಗಿದ್ದು.ಸಾರ್ವಜನಿಕರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳಾವಕಾಶದ ಕೊರತೆಯ ನಡುವೆ ಆರೋಗ್ಯ ಸೇವೆಯನ್ನು ಪಡೆಯುವಂತಾಗಿದೆ.ಅನುದಾನ ಬಳಕೆಯ ಹೆಸರಲ್ಲಿ ಉದ್ಯಾನವನಕ್ಕೆ ನಿಗದಿಯಾದ ಸ್ಥಳದಲ್ಲಿ ಕಟ್ಟಡ ನಿರ್ಮಿಸುವುದು ಸರಿಯಾದುದಲ್ಲ.ಅವೈಜ್ಞಾನಿಕ ಹಾಗೂ ಅಪ್ರಾಯೋಗಿಕ ಕಾಮಗಾರಿಗಳ ಪರಿಣಾಮದಿಂದ ಜಿಲ್ಲಾಸ್ಪತ್ರೆ ಆವರಣ ಕಾಂಕ್ರೀಟ್ ಸ್ಲಂ ನಂತಾಗಿದೆ.
ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣದ ಕಾರಣ ಬೆಂಕಿ ಅವಘಡ ಸಂಭವಿಸಿದರೆ ಕಾಲ್ತುಳಿತ ಸಾವುನೋವುಗಳು ಹೆಚ್ಚಾಗುವ ಸಾಧ್ಯತೆಯಿದ್ದು.ಇದೆ ಕಾರಣದಿಂದ ಆಗ್ನಿಶಾಮಕ ದಳ ಸುರಕ್ಷಾ ಪ್ರಮಾಣ ಪತ್ರವನ್ನು ನೀಡಿಲ್ಲ.ಹೀಗಿರುವಾಗ ಗಾಳಿ ಬೆಳಕಿಗೆ ತಡೆಯೊಡ್ಡಿ ಕಟ್ಟಡ ನಿರ್ಮಿಸಬಾರದು.ಸದರಿ ಸ್ಥಳವನ್ನು ಯಥಾರೀತಿ ಉದ್ಯಾನವಾಗಿಯೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಮಂಡ್ಯ ಅಸಿಟೇಟ್ ಕಾರ್ಖಾನೆಯ ೧೨೫ ಎಕರೆ ಭೂಮಿಯನ್ನು ಇಲ್ಲಿನ ದಲ್ಲಾಳಿ ರಾಜಕಾರಣ ಅಗ್ಗದ ದರಕ್ಕೆ ಖಾಸಗಿ ಬಿಲ್ಡರ್ ಗಳಿಗೆ ಧಾರೆ ಎರೆದ ಪರಿಣಾಮ ನಾಗರೀಕ ಸೌಲಭ್ಯಗಳಿಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ.
ಮೆಡಿಕಲ್ ಕಾಲೇಜಿಗೆ ಸೇರಿದ ೧೯ ಎಕರೆ ಒತ್ತುವರಿ ತೆರವುಗೊಳಿಸಿ ಆಸ್ಪತ್ರೆಯ ವಿಸ್ತರಣೆ ಸಾಧ್ಯವಿದ್ದರು ಜಿಲ್ಲೆಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮೋಹನ್ ಉದ್ಯಾನದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ.ಪರ್ಯಾಯ ಸ್ಥಳ ಗುರುತಿಸಿ ಅಲ್ಲಿ ಕಾಮಗಾರಿ ನಡೆಸುವ ಕುರಿತು ಚಿಂತಿಸಲಾಗುವುದು ಎಂದು ಘೋಷಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ಡಿ ಜಯರಾಂ.ಸೋಮಶೇಖರ. ಆಟೋ ವೆಂಕಟೇಶ್ ಶಿವರಾಜ್ . ಸವಿತಾ ಸಮಾಜ ಅಧ್ಯಕ್ಷ ಜಯರಾಂ.ಚಿಕ್ಕಮಂಡ್ಯ ಬೋರೆಗೌಡ.ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ. ರಾಜೇಂದ್ರ. ಮನು ಬಿಎಂ ಮೊದಲಾದವರಿದ್ದರು.


