*ಲೋಕಾಯುಕ್ತರಿಗೆ ಗಂಧದಕಡ್ಡಿ ರವಾನೆ*
ಕೆ.ಆರ್.ಪೇಟೆ,ಮಾ.07: ದೂರು ಅರ್ಜಿಗೆ ಯಾವುದೇ ಕ್ರಮ ವಹಿಸದೇ ಅರ್ಜಿಯನ್ನು ವರ್ಷಗಟ್ಟಲೆ ಕಡತದಲ್ಲಿ ಇಟ್ಟುಕೊಂಡಿದ್ದೇವೆ ಎಂದು ಹಿಂಬರಹ ನೀಡಿದ್ದ ಲೋಕಾಯುಕ್ತ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಕಡತಕ್ಕೆ ಪ್ರತಿದಿನ ಪೂಜೆಮಾಡಿ ಎಂದು ಗಂಧದಕಡ್ಡಿಯನ್ನು ಕಳುಹಿಸಿರುವ ಮೂಲಕ ಸಮಾಜ ಸೇವಕ ಎಚ್.ಬಿ.ಮಂಜುನಾಥ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕೃಷ್ಣರಾಜ ಪೇಟೆ ಪಟ್ಟಣದಲ್ಲಿ ಇರುವ ಖಾಸಿಂಖಾನ್ ಸಮುದಾಯ ಭವನದ ಆವರಣದಲ್ಲಿ ಹೆಚ್ಚುವರಿ ಹಾಲ್ ನಿರ್ಮಾಣಮಾಡಲಾಗಿದೆ ಎಂದು ಸುಮಾರು 50 ಲಕ್ಷ ರೂಪಾಯಿ ಹಣವನ್ನು ಖರ್ಚು ತೋರಿಸಲಾಗಿತ್ತು. ಆದರೆ ಖಾಸಿಂಖಾನ್ ಸಮುದಾಯ ಭವನದಲ್ಲಿ ಹೆಚ್ಚುವರಿ ಹಾಲ್ ನಿರ್ಮಾಣ ಮಾಡಿರಲಿಲ್ಲಾ. ಈ ಬಗ್ಗೆ ಎಚ್.ಬಿ.ಮಂಜುನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. . ಹೆಚ್ಚುವರಿ ಸಭಾ ಭವನ ನಿರ್ಮಾಣ ಮಾಡಲಾಗಿದೆಯೋ ಇಲ್ಲವೋ ಎಂದು ತನಿಖೆಮಾಡಲು ಲೋಕಾಯುಕ್ತ ಇಲಾಖೆಯಿಂದ ಬಂದಿದ್ದ ಎಂಜಿನಿಯರ್ ಅವರು ಪ್ರಕರಣದ ಒಬ್ಬರು ಎದುರುದಾರರ ಪರವಾಗಿ ನಿಂತು ಕಟ್ಟಡ ಕಟ್ಟಿಲ್ಲಾ ಎಂದು ನೈಜ ವರದಿಯನ್ನು ನೀಡುವ ಬದಲಿಗೆ ಹಳೆ ಕಟ್ಟಡ ದುರಸ್ಥಿ ಮಾಡಲಾಗಿದೆ ಎಂದು ವರದಿ ಮಾಡಿದ್ದರು. ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ಮಂಜುನಾಥ್ ಲೋಕಾಯುಕ್ತ ಕಚೇರಿಗೆ ಮತ್ತೊಂದು ದೂರನ್ನು ದಿನಾಂಕ 21-11-2024 ರಂದು ಸಲ್ಲಿಸಿ ತಪ್ಪು ಮಾಹಿತಿ ನೀಡಿರುವ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಜೊತೆಗೆ ಮತ್ತೊರ್ವ ಅಧಿಕಾರಿಯಿಂದ ಅವರ ದೂರಿನ ಬಗ್ಗೆ ತನಿಖೆ ನಡೆಸಲು ಮನವಿ ಮಾಡಿದ್ದರೂ.
ಆದರೇ ಲೋಕಾಯುಕ್ತ ಕಚೇರಿಯಲ್ಲಿ ಈ ಬಗ್ಗೆ ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿ ಕೋರಿದಾಗ ಲೋಕಾಯುಕ್ತದವರು ಅರ್ಜಿಗೆ ಯಾವುದೇ ಕ್ರಮ ವಹಿಸದೆ ವರ್ಷಗಟ್ಟಲೆ ಕಡತದಲ್ಲಿ ಇಡಲಾಗಿದೆ ಎಂಬ ಉತ್ತರ ನೀಡಿದ್ದಾರೆ. ಈ ಉತ್ತರಕ್ಕೆ ಬೇಸರಗೊಂಡ ಅವರು ಲೋಕಾಯುಕ್ತ ಕಛೇರಿಯಲ್ಲಿ ದೂರಿನ ಬಗ್ಗೆ ಸರಿಯಾಗಿ ಕೆಲಸಮಾಡಲು ಆಗದಿದ್ದರೆ ಕಡತಗಳಿಗೆ ಪೂಜೆಯನ್ನಾದರೂ ಮಾಡಿಕೊಂಡು ಇರಲಿ ಎಂದು ಗಂಧದಕಡ್ಡಿಯನ್ನು ಕಳುಹಿಸುತ್ತಿದ್ದೇನೆ.
ಲೋಕಾಯುಕ್ತಕ್ಕೆ ದೂರು ನೀಡುವ ಬಹುತೇಕ ದೂರುದಾರರು ಸಾಮಾಜಿಕ ಕಳಕಳಿಯಿಂದಲೇ ದೂರು ದಾಖಲು ಮಾಡಿರುತ್ತಾರೆ. ಇದರಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲಾ. ಆದರೆ ದಾಖಲಾತಿಗಳನ್ನು ಸಂಗ್ರಹಿಸಿ ದೂರು ನೀಡಲು ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಇದರ ಜೊತೆಗೆ ಸ್ಥಳೀಯವಾಗಿ ಹೋರಾಟಗಾರರಿಗೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಲೋಕಾಯುಕ್ತಕ್ಕೆ ಸಾಮಾಜಿಕ ಕಳಕಳಿಯಿಂದ ಕಷ್ಟಗಳ ನಡುವೆಯೂ ದೂರು ನೀಡುತ್ತೇವೆ. ಆದರೆ ಐದಾರು ವರ್ಷಗಳು ಕಳೆದರೂ ದೂರಿಗೆ ನ್ಯಾಯ ಕೊಡಿಸವುದು ಇರಲಿ, ನಮ್ಮ ಅರ್ಜಿಯನ್ನು ಕಡತದಲ್ಲಿ ಇಟ್ಟುಕೊಂಡಿದ್ದೇವೆ ಎಂದು ಹಿಂಬರಹ ನೀಡುವುದು ಖಂಡನೀಯ ಎಂದು ಮಂಜುನಾಥ್ ತಿಳಿಸಿದ್ದಾರೆ.


