ಮಂಡ್ಯ: ಸಾಮಾನ್ಯ ಜನರ ಜೀವನೋಪಾಯ ಮತ್ತು ಹಕ್ಕುಗಳ ಮೇಲಿನ ನಿರಂತರ ದಾಳಿ ನಿಲ್ಲಿಸಲು ಕೇಂದ್ರ ಸರಕಾರದ ಕಾರ್ಮಿಕ ಕೋಡ್ ರದ್ದು ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.೧೨ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಮತ್ತು ಸ್ವಯಂ ಪ್ರೇರಿತ ಬಂದ್ ನಡೆಸಲಾಗುವುದು ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿದ್ದ ೨೯ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಪೋರೇಟ್ ಸಂಸ್ಥೆಗಳಿಗೆ ನೆರವಾಗಲು ೪ ಕಾರ್ಮಿಕ ಸಂಹಿತೆಗಳನ್ನು ಪ್ರಕಟಿಸಿದೆ. ೨೦೧೯ ಹಾಗೂ ೨೦೨೦ರಲ್ಲೂ ಇದು ಜಾರಿಯಾಗದಂತೆ ೫ ಮುಷ್ಕರಗಳನ್ನು ಮಾಡಿ ತಡೆಹಿಡಿಯಲಾಗಿತ್ತು ಎಂದರು.
ಸಾರ್ವಜನಿಕ ಬಳಕೆಯ ವಿದ್ಯುತ್, ದೂರ ಸಂಪರ್ಕ, ಕಲ್ಲಿದ್ದಲು, ಗಣಿಗಾರಿಕೆ, ರೈಲ್ವೆ, ಹೆದ್ದಾರಿ, ಬಂದರು, ಹಡುಗು ಕಟ್ಟೆಗಳು, ನಗರಾಭಿವೃದ್ಧಿ, ತೈಲ ಮುಂತಾದವನ್ನು ಖಾಸಗೀಕರಣ ಮಾಡಲಾಗಿದೆ. ಭೂಸ್ವಾಧೀನ ಕಾಯ್ದೆ ಮೂಲಕ ಶೇ.೭೦ರಷ್ಟು ಕೃಷಿಕರು ನಿರುದ್ಯೋಗಿಗಳಾಗಿದ್ದಾರೆ. ಇದೀಗ ಯೂನಿಯನ್ ಮುಕ್ತ ವಾತಾವರಣ ಕಲ್ಪಿಸಲು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಹೊಸ ಶ್ರಮಿಕ ನೀತಿ ಜಾರಿಗೆ ತರಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿಯ ಕಾಯ್ದೆಯ ಮೇಲಿನ ನಿಯಂತ್ರಣ, ಮನರೇಗಾ ಯೋಜನೆ ಮುಂದುವರಿಕೆ, ಬಲವಂತದ ಭೂ ಸ್ವಾಧೀನ, ಭೂ, ಸುಧಾರಣಾ ಕಾಯ್ದೆ ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಶಾಸನ ಭದ್ರತೆ ಮುಕ್ತ ವಾಣಿಜ್ಯ ಒಪ್ಪಂದ ಹಾಗೂ ರಾಜ್ಯ ಸರಕಾರ ೪ ಲೇಬರ್ ಕೋಡ್ ನಿಯಮಾವಳಿ ಹಾಗೂ ಕೇಂದ್ರ ಸರಕಾರದ ಎಲ್ಲ ಮಾನವ ವಿರೋಧಿ ಮಸೂದೆ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ ಮಾತನಾಡಿ, ದೇಶಾದ್ಯಂತ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರ ಹಾಗೂ ಸ್ವಯಂ ಪ್ರೇರಿತ ಬಂದ್ನ ಹಿನ್ನಲೆ ಫೆ.೫ರಿಂದ ಜಿಲ್ಲೆ ಎಲ್ಲ ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಲಾಗುವುದು. ಫೆ.೧೨ರಂದು ನಗರದಾದ್ಯಂತ ಬೈಕ್ ಹಾಗೂ ಆಟೋಗಳ ಜಾಥ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಕರುನಾಡ ಸೇವಕರು ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಎಐಎಡಬ್ಲ್ಯೂಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಜನಶಕ್ತಿಯ ಎಂ.ಸಿದ್ದರಾಜು ಇದ್ದರು.


