ಮಂಡ್ಯದ ನಗರಾಭಿವೃದ್ಧಿ ಇಲಾಖೆಯಲ್ಲಿ ‘ಫೋರ್ಜರಿ’ ಹಗರಣ: ಅಧಿಕಾರಿಗಳ ಮೌನವೇಕೆ?

ಸರಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ಇರಬೇಕಾದ ಎಡೆಯಲ್ಲಿ ನಕಲಿ ದಾಖಲೆಗಳ ಸೃಷ್ಟಿ ಮತ್ತು ಸಹಿ ಫೋರ್ಜರಿ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಚ್ಚರಿಯೆಂದರೆ, ಈ ಹಗರಣ ನಡೆದು ತಿಂಗಳು ಕಳೆದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕರ ಕಚೇರಿಯಲ್ಲಿ ಸಹಾಯಕ ನಿರ್ದೇಶಕಿ ಹೆಚ್.ಕೆ. ರೇಣುಕಾ ಸಹಿಯನ್ನು ದಳ್ಳಾಳಿಯೊಬ್ಬ ಫೋರ್ಜರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿದ್ದಾನೆ. ದಳ್ಳಾಳಿ ಬಿ. ಶಂಕರ್ ಎಂಬಾತನಿಗೆ ಕಚೇರಿಯ ಎಸ್ಡಿಎ ಹರ್ಷ ಮತ್ತು ಹೊರಗುತ್ತಿಗೆ ನೌಕರರಾದ ಶೋಭಾ ಜೊತೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನಕಲಿ ಸಹಿ ಇರುವ ದಾಖಲೆಗಳನ್ನು ಕೇವಲ ಸೃಷ್ಟಿಸಿ ಸುಮ್ಮನಾಗದೆ, ಅವುಗಳನ್ನು ಅಧಿಕೃತ ಕಡತಗಳಂತೆ ವರ್ಗಾಯಿಸಿ ಆನ್ಲೈನ್ನಲ್ಲಿ ಅಪ್ಲೋಡ್ ಕೂಡ ಮಾಡಲಾಗಿದೆ. ಇದು ವ್ಯವಸ್ಥಿತವಾಗಿ ನಡೆದ ಹಗರಣ ಎಂಬುದು ಸ್ಪಷ್ಟವಾಗುತ್ತಿದೆ. ತಮ್ಮದೇ ಸಹಿ ಫೋರ್ಜರಿಯಾಗಿದ್ದರೂ ಸಹಾಯಕ ನಿರ್ದೇಶಕರು ಈವರೆಗೂ ಪೊಲೀಸರಿಗೆ ದೂರು ನೀಡದಿರುವುದು ಯಾಕೆ? ಕಚೇರಿಯೊಳಗಿನ ಸಿಬ್ಬಂದಿಯೇ ಭಾಗಿಯಾಗಿರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆಯೇ?
ಈ ಸಂಬಂಧ ಈಗಾಗಲೇ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಹಾಗೂ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕಿದೆ.


