ಮಂಡ್ಯ: ಮಳವಳ್ಳಿ ತಾಲೂಕಿನ ಮಾರೇಹಳ್ಳಿಯ ೧೪ ಗುಂಟೆ ಸರಕಾರಿ ಜಮೀನನ್ನು ಪುರಸಭೆಯ ಅಧಿಕಾರಿಗಳು ಅಕ್ರಮವಾಗಿ ಈ ಸ್ವತ್ತು ಮಾಡಿ ಅವ್ಯವಹಾರ ಎಸಗಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಬಿ.ಎ.ಕಲ್ಲೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಸರ್ವೆ ನಂ.೧/೩ರಲ್ಲಿರುವ ಸ್ಥಳದಲ್ಲಿ ೦.೦೨ ಗುಂಟೆ ಸರಕಾರಿ ಖರಾಬಿದ್ದರೂ ಅಧಿಕಾರಿಗಳು ೫೦:೫೦ ಅನುಪಾದಲ್ಲಿ ಈ ಸ್ವತ್ತು ಮಾಡಿ ಕೊಟ್ಟು, ಲಕ್ಷಾಂತರ ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.
ಈ ಸ್ವತ್ತು ಮಾಡಿಕೊಂಡವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಭೂಸ್ವಾಧೀನ ಮಾಡಿಕೊಂಡಿರುವುದಕ್ಕೆ ಅಧಿಕಾರಿಗಳಿಂದ ಲಕ್ಷಾಂತರ ಪರಿಹಾರ ಪಡೆದಿದ್ದಾರೆ. ಇದಕ್ಕೆ ಪುರಸಭೆ ಅಧಿಕಾರಿಗಳು ಮಾಡಿರುವ ಅವಾಂತರವೇ ಕಾರಣ ಎಂದು ದೂರಿದರು.
ಮತ್ತೊಂದು ಪ್ರಕರಣದಲ್ಲಿ ಮಳವಳ್ಳಿ ಪಟ್ಟಣದ ವಾರ್ಡ್ ನಂ.೧೬ರಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ವಕೀಲರ ಕುಟುಂಬ ಅಕ್ರಮವಾಗಿ ಸೇರಿಕೊಂಡಿದ್ದು, ಖಾಲಿ ನಿವೇಶನಕ್ಕೆ ಕ್ರಯ ಪಡೆದು ಅದಕ್ಕೆ ಹೊಂದಿಕೊಂಡಿರುವ ಸರಕಾರಿ ಸ್ಥಳದಲ್ಲಿ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ನಾಗೇಶ್, ಶಿವಣ್ಣ, ಪುಟ್ಟರಾಜು ಇದ್ದರು.


