ಮಂಡ್ಯ:ಜು.೨೬.ಮೈಷುಗರ್ ಸಕ್ಕರೆ ಕಾರ್ಖಾನೆಯು ಯಶಸ್ವಿಯಾಗಿ ಕಬ್ಬು ನುರಿಸಲು ಮೂರನೇ ಬಾರಿಗೆ ೧೦ ಕೋಟಿ ರೂಗಳ ನೆರವನ್ನು ನೀಡಿ ಸಹಕರಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸತತವಾಗಿ ನೆರವು ನೀಡುತ್ತಿದ್ದು. ಕಳೆದ ಹಂಗಾಮಿನಲ್ಲಿ ಸರ್ಕಾರದ ಅನುದಾನ ಪಡೆಯದೇ ರೈತರಿಗೆ ಪೂರ್ಣ ಹಣವನ್ನು ಪಾವತಿ ಮಾಡಿ ಮೈಷುಗರ್ ಇತಿಹಾಸದಲ್ಲಿ ಮಾದರಿಯಾಗಿದ್ದೇವೆ ಎಂದರು.
೨೦೨೩ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೈಷುಗರ್ಗೆ ೫೦ ಕೋಟಿ ಅನುದಾನ ನೀಡಿತು. ಇತ್ತೀಚೆಗೆ ೫೩ ಕೋಟಿ ವಿದ್ಯುತ್ ಬಿಲ್ ಮನ್ನ ಮಾಡಿದ ಸರ್ಕಾರ ಇದೀಗ ೧೦ ಕೋಟಿ ರೂ ನೆರವನ್ನು ನೀಡಿದೆ. ಈ ಬಾರಿಯೂ ಕಬ್ಬು ನಾಟಿ ಮಾಡಿದ ಹಿರಿತನದ ಆಧಾರದಲ್ಲಿ ನೊಂದಣಿಯಾಗಿರುವ ಕಬ್ಬನ್ನು ಯಶಸ್ವಿಯಾಗಿ ನುರಿಯಲಿದ್ದೇವೆ ಎಂದು ಹೇಳಿದರು.
ಒಪ್ಪಿಗೆಯಾಗಿರುವ ಕಬ್ಬನ್ನು ಯಶಸ್ವಿ ಯಾಗಿ ಅರೆಯುವ ಮೂಲಕ ಈ ಬಾರಿ ಪಡೆಯುವ ನೆರವಿನಲ್ಲಿ ಕನಿಷ್ಠ ೪ ಕೋಟಿ ರೂಗಳನ್ನು ಹಿಂದಿರುಗಿಸುವ ಮೂಲಕ ಇತಿಹಾಸ ಬರೆಯುವ ಯೋಜನೆ ರೂಪಿಸಿಕೊಂ ಡಿರುವುದಾಗಿ ತಿಳಿಸಿದರು.
*
ಮೈಶುಗರ್ ಒತ್ತುವರಿ ತೆರವು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಗಧರ್. ನಗರ ವ್ಯಾಪ್ತಿಯಲ್ಲಿ ಮೈಷುಗರ್ ಕಂಪನಿಗೆ ಸೇರಬೇಕಾದ ಆರೂವರೆಯಿಂದ ಏಳು ಎಕರೆ ಭೂಮಿ ಒತ್ತುವರಿಯಾಗಿದೆ. ಹಾಗೂ ಕಂದಾಯ ವ್ಯಾಪ್ತಿಯ ೨೦ರಿಂದ ೩೦ ಎಕರೆ ಮೈಶುಗರ್ ಗೆ ಸೇರಿದ ಭೂಮಿ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು.
ಒತ್ತುವರಿದಾರರ ಮಾಹಿತಿಯನ್ನು ಮುಂದಿನ ಒಂದು ವಾರದೊಳಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ ಅವರು ಒತ್ತುವರಿ ತೆರವುಗೊಳಿಸದಂತೆ ಜಿಲ್ಲೆಯ ಯಾವುದೆ ಶಾಸಕರು ಸಚಿವರು ತಮ್ಮ ಮೇಲೆ ಒತ್ತಡ ಹೇರಿಲ್ಲ.ಒತ್ತುವರಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಬದಲಿಗೆ ಮಾರುಕಟ್ಟೆಯ ದರದಂತೆ ಬಾಡಿಗೆ ನೀಡುವುದಾದರೆ ಒತ್ತುವರಿದಾರರಿಗೆ ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದರು.
ಜು.೨೮ರಂದು ಮದ್ದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಉದ್ಘಾಟನೆಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಪುಟದ ಅನೇಕ ಸಚಿವರು ಆಗಮಿಸಲಿದ್ದು, ಸದರಿ ಕಾರ್ಯ ಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಟಿಯಲ್ಲಿ ಕೆ.ಸುರೇಶ್, ಶ್ರೀಧರ್, ವೀಣಾ ಶಂಕರ್, ಉದಯ್, ದೇವಯ್ಯ, ಸಿ.ಎಂ.ದ್ಯಾವಪ್ಪ, ನಾಗರಾಜು ಇದ್ದರು.