ಹೊರಗುತ್ತಿಗೆ ನೌಕರರ ವಸತಿ ಬೇಡಿಕೆ ಈಡೇರಿಕೆಗೆ ಬದ್ದ:ಶಾಸಕ ಗಣಿಗ ರವಿಕುಮಾರ್ ಘೋಷಣೆ
ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹೊರಗುತ್ತಿಗೆ ನೌಕರರಿಗೆ ಸೂರು ಕಲ್ಪಿಸಲು ನಾನು ಬದ್ದನಿದ್ದೇನೆ.ಇದು ಬೇಡಿಕೆಯಲ್ಲ ಕರ್ತವ್ಯವಾಗಿದೆ ಎಂದು ಶಾಸಕ ಗಣಿಗ ರವಿಕುಮಾರ್ ಘೋಷಿಸಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಆಸ್ಪತ್ರೆ ಮೆಡಿಕಲ್ ಕಾಲೇಜು ಹೊರಗುತ್ತಿಗೆ ನೌಕರರ ಸಂಘದ ಸ್ಥಾಪನೆಯ ಹದಿನೈದನೆ ವರ್ಷದ ಆಚರಣೆ ಹಾಗೂ ಕಾಯಕಯೋಗಿಗಳಿಗೆ ಶ್ರಮಶ್ರೀ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮಂಡ್ಯ ನಗರದಲ್ಲಿ ನಗರದ ಅಭಿವೃದ್ಧಿಗೆ ಬೇಕಾದ ಭೂಮಿಯನ್ನು ಮೀಸಲಿಟ್ಟಿಲ್ಲ.ಆದಾಗ್ಯೂ ಹಲ್ಲೇಗೆರೆ ಬೂದನೂರು ವಸತಿರಹಿತರಿಗೆ ಮನೆಗಳನ್ನು ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ನಗರದ ಹಾಲಹಳ್ಳಿಯಲ್ಲಿ ಎರಡು ಎಕರೆ ಸರಕಾರಿ ಭೂಮಿ ಗುರುತಿಸಲಾಗಿದೆ.
ನಮ್ಮ ಸರಕಾರ ಬಡವರು ಕಾರ್ಮಿಕರ ಪರವಾಗಿದ್ದು.ಹಂತ ಹಂತವಾಗಿ ಗುತ್ತಿಗೆ ಪದ್ದತಿ ತೆಗೆದು ನೇರಪಾವತಿ ಮಾಡಲಾಗುವುದು.ಮೆಡಿಕಲ್ ಕಾಲೇಜು ಆಸ್ಪತ್ರೆಯ ಹೊರಗುತ್ತಿಗೆ ನೌಕರರಿಗೆ ಅಗತ್ಯ ವಸತಿ ಕಲ್ಪಿಸಲಾಗುವುದು ಎಂದರು.
ನೇರಪಾವತಿ ಜಾರಿಗೆ ಆಗ್ರಹ
ಸಂಘದ ಗೌರವಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ
ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸ್ವಚ್ಚತೆ ಮತ್ತು ಡಿ ದರ್ಜೆ ಸೇರಿದಂತೆ ಐದು ನೂರಕ್ಕು ಹೆಚ್ಚು ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನೌಕರರಿಗೂ ಪೌರಕಾರ್ಮಿಕರ ಮಾದರಿಯಲ್ಲಿ ಗುತ್ತಿಗೆ ರದ್ದುಗೊಳಿಸಿ ನೇರಪಾವತಿ ಜಾರಿಗೊಳಿಸಿದರೆ ಪ್ರತೀವರ್ಷ ಮಿಮ್ಸ್ ಗೆ ಜಿಎಸ್ ಟಿ ಬಾಬ್ತು ೨ ಕೋಟಿ ಉಳಿತಾಯವಾಗಲಿದೆ.ಕಾರ್ಮಿಕರ ದಕ್ಷತೆಯು ಹೆಚ್ಚಲಿದೆ ಎಂದರು.ಹೊರಗುತ್ತಿಗೆ ನೌಕರರಿಗೆ ಕನಿಷ್ಟ ವೇತನ.ಭವಿಷ್ಯ ನಿಧಿ.ಇಎಸ್ ಐ .ನಿಯಮಿತ ದುಡಿಮೆ.ರಜೆ ಸಿಗುವಲ್ಲಿ ಹಿಂದಿನ ಕಾರ್ಮಿಕರ ಹೋರಾಟದ ಕೊಡುಗೆಯಿದೆ
ಸಮರ್ಪಕ ಆರೋಗ್ಯ ಸೇವೆಯಲ್ಲಿ ಕೆಳಹಂತದ ಕಾರ್ಮಿಕರ ಕೊಡುಗೆ ದೊಡ್ಡದಿದೆ.ಆದರೆ ಅದನ್ನು ಪರಿಗಣಿಸದೆ ಹೊರಗುತ್ತಿಗೆ ಹೆಸರಿನಲ್ಲಿ ಸರಕಾರ ತಾನೇ ಜೀತಗಾರಿಕೆ ನಡೆಸುತ್ತಿದೆ.ಹಿಂದಿನ ಕಾಲದ ಜೀತಗಾರಿಕೆಗೂ ಹೊರಗುತ್ತಿಗೆ ಪದ್ದತಿಗೂ ಯಾವುದೆ ವ್ಯತ್ಯಾಸ ಇಲ್ಲವಾಗಿದೆ.ರಾಜ್ಯದ ವಿವಿಧ ಇಲಾಖೆಗಳಲ್ಲಿ ಎರಡುವರೆ ಲಕ್ಷ ಹೊರಗುತ್ತಿಗೆ ನೌಕರರು ಇದ್ದು.ಇವರು ಆಧುನಿಕ ಜೀತದಾಳುಗಳಾಗಿದ್ದಾರೆ.ಗುತ್ತಿಗೆ ಪದ್ದತಿ ರದ್ದತಿಗಾಗಿ ಮುಂದಿನ ಬಜೆಟ್ ಅಧಿವೇಶನ ಕಾಲಕ್ಕೆ ಬೆಂಗಳೂರಿನಲ್ಲಿ ಐವತ್ತು ಸಾವಿರಕ್ಕು ಹೆಚ್ಚು ಹೊರಗುತ್ತಿಗೆ ನೌಕರರ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಅವರು ಘೋಷಿಸಿದರು.
ಸಮಾನ ವೇತನಕ್ಕೆ ಆಗ್ರಹ: ಗುತ್ತಿಗೆ.ಖಾಯಂ ಎಂಬ ವ್ಯತ್ಯಾಸ ಇಲ್ಲದೆ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು.ಆಗಷ್ಟೆ ಎಲ್ಲೆಡೆ ಸಮಾನತೆ ಸಾಧ್ಯವಾಗಲಿದೆ ಎಂದು ಕನ್ನಡ ಪರಿಚಾರಕ ಕೆ.ಟಿ ಹನುಮಂತು ಪ್ರತಿಪಾದಿಸಿದರು.ಪ್ರತಿಯೊಂದು ವೃತ್ತಿಗೂ ತನ್ನದೆ ಮಹತ್ವವಿದೆ.ಇಲ್ಲಿ ಯಾರು ಮುಖ್ಯರಲ್ಲ ಯಾರು ಅಮುಖ್ಯರಲ್ಲ ಎಂಬ ತತ್ವ ಮುಖ್ಯವಾಗಬೇಕು ಎಂದರು
ದುಡಿಮೆಯಲ್ಲಿ ಶಿವನನ್ನು ಕಂಡ ಕುವೆಂಪುರವರ ತತ್ವ ನಮಗೆ ಮುಖ್ಯವಾಗಬೇಕಿದೆ.ಕಾರ್ಮಿಕರ ಪರವಾಗಿನ ಯಾವುದೇ ಪ್ರಯತ್ನಕ್ಕೆ ನನ್ನ ಬೆಂಬಲ ಸದಾ ಇದೆಯೆಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ನ ವಿನಯ್ ಕುಮಾರ್ ಭರವಸೆ ನೀಡಿದರು.
ಇದೇ ಸಂಧರ್ಭದಲ್ಲಿ ಪ್ರಸೂತಿ ತಜ್ನೆ ಡಾ.ಶಿಲ್ಪಾ.ಸ್ಕಾನಿಂಗ್ ವಿಭಾಗದ ಡಾ.ದೇವಿಕಾ.ಡಿ ಗ್ರೂಪ್ ನೌಕರರಾದ ಕೃಷ್ಣ.ಹಾಗೂ ಮಂಜುನಾಥ್.ಮತ್ತು ಸ್ವಚ್ಚತಾ ಕಾರ್ಮಿಕೆ ಯಶೋಧಮ್ಮರಿಗೆ ಶ್ರಮಶ್ರೀ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ. ಎಸ್ ಕೆ.ರಾಜೂಗೌಡ ಚಿತ್ರಕೂಟದ ಅರವಿಂದ್ ಪ್ರಭು.ಹೊರಗುತ್ತಿಗೆ ನೌಕರರ ಸಂಘದ ಸಂಚಾಲಕಿ ವೆಂಕಟಲಕ್ಷ್ಮೀ.ಖಜಾಂಚಿ ಚಿನ್ನರಾಜು.ಪತ್ರಕರ್ತ ಸಂತೋಷ್ ಜಿ.ಉಪಸ್ಥಿತರಿದ್ದರು. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.


