ಮಂಡ್ಯ ನಗರದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಪೂರ್ವ ಭಾಗದಲ್ಲಿ ಮತ್ತು ನಗರದಾದ್ಯಂತ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸುತ್ತಲಿನ ಪ್ರದೇಶದಲ್ಲಿ ವಿವಿಧ ಸರಕಾರಿ ನೌಕರರ ಸಂಘಟನೆಗಳಿಗೆ ಸಂಘದ ಚಟುವಟಿಕೆಗಳಿಗಾಗಿ ಸರಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಈ ಸ್ಥಳದಲ್ಲಿ ಘೋಷಿತ ಉದ್ದೇಶದ ಬದಲು ಅನ್ಯ ಉದ್ದೇಶಕ್ಕೆ ಅಂದರೆ ವಾಣಿಜ್ಯ ಚಟುವಟಿಕೆಗಳಿಗೆ ಪೂರಕವಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ದೂರಲಾಗಿದೆ.
ಮಂಡ್ಯ ನಗರದಲ್ಲಿ ನಗರಸಭೆಯ ಅನುಮೋದಿತ ನಕ್ಷೆ ಉಲ್ಲಂಘನೆ ಹಾಗೂ ನಿಗದಿತ ಸೆಟ್ ಬ್ಯಾಕ್ ಬಿಡದೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ, ಅಲ್ಲದೆ ಮಂಜೂರಾದ ನಿವೇಶನದ ವ್ಯಾಪ್ತಿ ಮೀರಿ ರಸ್ತೆ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಸಾಗಿರುತ್ತದೆ, ಇದರಿಂದಾಗಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸರಕಾರಿ ಕಚೇರಿಗಳಿಗೆ ಭೇಟಿ ನೀಡುವ ರೈತರು ಸಾರ್ವಜನಿಕರು ಓಡಾಡಲು ಕೂರಲು ಸಹ ಸ್ಥಳ ಇಲ್ಲದಂತೆ ಮಾಡಲಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಕಂಡು ಕಾಣದಂತೆ ಮೌನವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೌರಾಡಳಿತ ನಿಯಮಗಳ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು.ಸೂಚಿತ ಉದ್ದೇಶವಲ್ಲದೆ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಹಾಗೂ ನಿಗದಿತ ಅವಧಿಯಲ್ಲಿ ಬಳಕೆ ಮಾಡದ ನಿವೇಶನಗಳ ಮಂಜೂರಾತಿಯನ್ನು ಹಿಂಪಡೆಯುವಂತೆ ಮನವಿಯಲ್ಲಿ ಕೋರಲಾಗಿದೆ.
ಅಕ್ರಮ ನಿರ್ಮಾಣಕ್ಕೆ ಬ್ರೇಕ್ ಹಾಕಿ
ಮಂಡ್ಯ ನಗರದಲ್ಲಿ ಪರವಾನಿಗೆ ಪಡೆಯದೆ ಹಾಗೂ ನಕ್ಷೇ ಉಲ್ಲಂಘನೆ ಮತ್ತು ಸೆಟ್ ಬ್ಯಾಕ್ ಬಿಡದೆ ಹಾಗೂ ರಾಜಕಾಲುವೆ ಮಳೆಗಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಈ ಬಗ್ಗೆ ನಗರಸಭೆಗೆ ದೂರು ನೀಡಿದರೂ ಅವರು ನೋಟಿಸ್ ಕೊಟ್ಟಂತೆ ಮಾಡಿ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಕ್ರಮ ನಿರ್ಮಾಣದ ವಿರುದ್ದ ಸಾಕಷ್ಟು ದೂರುಗಳಿದ್ದರು ಯಾವುದೆ ದೂರುಗಳಿಲ್ಲ ಎಂದು ಉಪಲೋಕಾಯುಕ್ತರನ್ನೆ ದಾರಿ ತಪ್ಪಿಸಿದ್ದಾರೆ ನಗರಸಭೆಯ ಅಧಿಕಾರಿಗಳು. ಅಕ್ರಮ ನಿರ್ಮಾಣದ ವಿರುದ್ದ ನಿಯಮಾನುಸಾರ ಯಾವುದೆ ಕ್ರಮ ಜರುಗುತ್ತಿಲ್ಲ.ಇದರಿಂದ ನಗರಸಭೆಗೆ ಆದಾಯ ನಷ್ಟದ ಜತೆಗೆ ನಾಗರೀಕರಿಗೂ ಕಿರಿಕಿರಿಯಾಗುತ್ತಿದ್ದು ಅಕ್ರಮ ನಿರ್ಮಾಣಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಲಾಗಿದೆ.
ಮಂಡ್ಯ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ಕಳಪೆಯಾಗಿರುವುದರ ಜತೆಗೆ ಅವೈಜ್ನಾನಿಕವಾಗಿದೆ.ನಿಯಮಾನುಸಾರ ರಸ್ತೆ ಮಧ್ಯಭಾಗದಿಂದ ೬೦ ಅಡಿ ಅಂತರದಲ್ಲಿ ಕಟ್ಟಡಗಳನ್ನು ನಿರ್ಮಿಸಬೇಕು.ಸಕ್ಷಮ ಪ್ರಾಧಿಕಾರ ಸಹ ಈ ಮಾನದಂಡದ ಮೇಲೆ ಪರವಾನಗಿ ನೀಡಬೇಕು.ಆದರೆ ರಸ್ತೆ ಒತ್ತುವರಿ ತೆರವುಗೊಳಿಸದೆ ಅಗತ್ಯ ಚರಂಡಿ ನಿರ್ಮಿಸದೆ ಮನಸೋಇಚ್ಚೆ ಕಾಮಗಾರಿ ನಡೆಸಿ ತಮಗೆ ತೋಚಿದಷ್ಟು ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ.ನಗರದ ಮಹವೀರ ವೃತ್ತದಿಂದ ನಂದಾ ವೃತ್ತದವರೆಗೆ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ.ಇಲ್ಲಿ ಒತ್ತುವರಿ ತೆರವುಗೊಳಿಸದೆ ಇಕ್ಕಟ್ಟಾದ ಪಾದಚಾರಿ ಮಾರ್ಗ ನಿರ್ಮಿಸಿ ಒತ್ತುವರಿಗೆ ಅಧಿಕೃತ ಮಾನ್ಯತೆ ನೀಡಲಾಗುತ್ತಿದೆ.ಒತ್ತುವರಿ ತೆರವುಗೊಳಿಸಿ ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಿಸಬೇಕು .ಈ ಸಂಬಂದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸ್ಥಾನೀಕ ಸಹಾಯಕಿ ರೋಹಿಣಿ ಈ ಸಂಬಂದ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಇದೇ ಸಂಧರ್ಭದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಸಂಬಂದ ನಗರಸಭೆ ಆಯುಕ್ತೆ ಪಂಪಾಶ್ರೀಯವರಿಗೂ ಮನವಿ ಸಲ್ಲಿಸಿ ಕ್ರಮಕ್ಕೆ ಕೋರಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ.ಕರವೇ ಆಟೋ ಘಟಕದ ವೆಂಕಟೇಶ್, ಮುದ್ದೇಗೌಡ, ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ, ಪಾಂಡು, ಕಿರಣ್ ಕುಮಾರ್, ಜಯರಾಮ್ ಗಾಣದಾಳು, ಆನಂದ್ ಕುಮಾರ್ ಕೊಮ್ಮೇರಹಳ್ಳಿ, ಯಲಿಯೂರು ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.