ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ ಮಂಜೇಗೌಡರಿಗೆ ಮಂಡ್ಯದ ವಿವಿಧ ಪ್ರಗತಿಪರ ಸಂಘಟನೆಗಳು ಬುಧವಾರ ಸಂಜೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರದ್ಧಾಂಜಲಿ ಅರ್ಪಿಸಿ, ಸರ್ಕಾರ ಹಾಗೂ ಜಿಲ್ಲಾಡಳಿತದ ಸಾಂಸ್ಕ್ರತಿಕ ಪ್ರತಿರೋಧ ವ್ಯಕ್ತಪಡಿಸಿದವು.
ಹುರುಗಲವಾಡಿ ರಾಮಯ್ಯ, ಗಾಮನಹಳ್ಳಿಸ್ವಾಮಿ ಮತ್ತು ತಂಡದವರಿಂದ ಹೋರಾಟದ ಗೀತೆಗಳನ್ನು ಹಾಡಿ ರೈತರ ತ್ಯಾಗವನ್ನು ಸ್ಮರಿಸಲಾಯಿತು. ಚಿತ್ರಕಲಾವಿದ ತೂಬಿನಕೆರೆ ಗೋವಿಂದು ಕುಂಚಗಳಲ್ಲಿ ರೈತರು ಪ್ರಸ್ತುತ ಪರಿಸ್ಥಿತಿಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದರು.
ಸದ್ದಾಂ ತಗ್ಗಹಳ್ಳಿ ಮತ್ತು ಶಿವಕುಮಾರ ಆರಾಧ್ಯ ಅವರು ರೈತನ ಬಗ್ಗೆ ಕವನಗಳನ್ನು ವಾಚನ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ತೆರೆದಿಟ್ಟರು.
ಕರುನಾಡು ಸೇವಕರು ಸಂಘಟನೆಯ ನಾಗಣ್ಣಗೌಡ ಮಾತನಾಡಿ, ನಿನ್ನೆ ನಾವು ಪ್ರತಿಭಟನೆ ನಡೆಸಿದ ಫಲವಾಗಿ ಸರ್ಕಾರ ಎಚ್ಚೆತ್ತಿದೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಚಿವರು ತೆರಳಿ ಮೃತ ರೈತನ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಇಷ್ಟಾದರೆ ಸಾಲದು ಪ್ರತಿ ಇಲಾಖೆಗಳಲ್ಲಿ ಇರುವ ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದರು.
ನ್ಯಾಯವಾದಿ ಬಿ.ಟಿ.ವಿಶ್ವನಾಥ್ ಮಾತನಾಡಿ, ಸರ್ಕಾರದ ಪ್ರತಿ ಇಲಾಖೆಗಳಲ್ಲಿ ರೈತ ವಿರೋಧಿ ಅಧಿಕಾರಿಗಳಿದ್ದರೆ, ಸರ್ಕಾರ ಅವಕಾಶ ನೀಡಿದರೆ ಅಂತಹ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು ಇಲ್ಲಿರುವ ಹಲವು ಸಂಘಟನೆಗಳ ಮುಖಂಡರು ಬಹಿರಂಗಪಡಿಸುತ್ತೇವೆ. ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಎಚ್ಚರಿಸಿದರು.
ಜಾಗೃತ ಕರ್ನಾಟಕದ ಸಂಚಾಲಕ ಎನ್.ನಾಗೇಶ್, ಚೀರನಹಳ್ಳಿ ಲಕ್ಷ್ಮಣ್ ಸೇರಿದಂತೆ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಅರವಿಂದ ಪ್ರಭು, ಹೆಚ್.ಡಿ.ಜಯರಾಂ, ಎಸ್.ನಾರಾಯಣ್, ನಾರಾಯಣಸ್ವಾಮಿ, ಹನುಮೇಶ್, ಜಾಗೃತ ಕರ್ನಾಟಕದ ಸಂಚಾಲಕರಾದ ನಗರಕೆರೆ ಜಗದೀಶ್, ಪೃಥ್ವಿರಾಜ್, ಸುಬ್ರಮಣ್ಯ, ಕೀಲಾರ ಕೃಷ್ಣೇಗೌಡ, ಸತ್ಯಮೂರ್ತಿ, ಸಂಜು ಆಲಕೆರೆ ಸೇರಿದಂತೆ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.


