ಮಂಗಳವಾರ ಮಂಡ್ಯದಲ್ಲಿ ಬೇಂದ್ರೆ-ಕೆಎಸ್ನ ಓದಿನಹಾದಿ
ಈ ಮಂಗಳವಾರ ಮಂಡ್ಯ ನಗರದಲ್ಲಿ ಅಪರೂಪದ ಕವಿಸಂಜೆಯೊಂದು ಜರುಗುತ್ತಿದೆ. ದಿನಾಂಕ 13.1.2026ರಂದು ಸಂಜೆ 6 ಗಂಟೆಗೆ ಮಂಡ್ಯ ನಗರದ ಶಿವನಂಜಪ್ಪ ಪಾರ್ಕ್ನಲ್ಲಿ ಕನ್ನಡ ಕಾವ್ಯಜಗತ್ತಿನ ಮೇರುಶಿಖರಗಳಾದ ವರಕವಿ ದ.ರಾ.ಬೇಂದ್ರೆ ಮತ್ತು ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಜನ್ಮ ವರ್ಷಾಚರಣೆಯ ನಿಮಿತ್ತ ‘ಆ ಮಹಾಕಾವ್ಯ ಈ ಭಾವಗೀತೆ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಂಡ್ಯ ನಗರದಲ್ಲಿ ಓದುವ ಸಂಸ್ಕೃತಿ ಪಸರಿಸಲು ಪ್ರತಿ ತಿಂಗಳ ಎರಡನೇ ಮಂಗಳವಾರ ಪರಿಚಯ ಪ್ರಕಾಶನ ನಿರಂತರವಾಗಿ ಆಯೋಜಿಸುತ್ತಿರುವ ಓದಿನಹಾದಿಯ 7ನೇ ಸಂಚಿಕೆಯನ್ನು ಈ ಬಾರಿ ಕವಿಗಳಿಗೆ ಸಮರ್ಪಿಸಲಾಗುತ್ತಿದೆ. ಕನ್ನಡ ಸಾಹಿತ್ಯಲೋಕವನ್ನು ತಮ್ಮ ಭಾವಲೋಕದ ಕಾವ್ಯಸೃಷ್ಟಿಯಿಂದ ಶ್ರೀಮಂತಗೊಳಿಸಿದ ಬೇಂದ್ರೆ ಮತ್ತು ಕೆಎಸ್ನ ಅವರ ನೆನಪುಗಳ ಮೆಲುಕು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಹಾಕವಿಗಳಿಬ್ಬರ ಕುರಿತು ʼಆ ಮಹಾಕಾವ್ಯ – ಈ ಭಾವಗೀತೆʼ ಎಂಬ ವಿಶೇಷ ಉಪನ್ಯಾಸವನ್ನು ಕನ್ನಡ ಪ್ರಾಧ್ಯಾಪಕರಾದ ಪ್ರೊ.ಜಿ.ಡಿ.ಶಿವರಾಜ್ ಅವರು ನೀಡಲಿದ್ದಾರೆ.
ಇದೇ ಮೊದಲ ಬಾರಿಗೆ ಓದಿನಹಾದಿಯಲ್ಲಿ ಕವಿಗಳ ಕುರಿತು ಕಾರ್ಯಕ್ರಮ ಆಯೋಜಿಸಲಾಗಿದ್ದು, ಕನ್ನಡ ಭಾಷೆಗೆ ಕಾವ್ಯದ ಮೂಲಕವೇ ಜ್ಞಾನಪೀಠ ಗೌರವ ತಂದುಕೊಟ್ಟ ಅನ್ನಾವತಾರದ ಮಹಾಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ಕನ್ನಡ ನಾಡಿನಾದ್ಯಂತ ಮೈಸೂರು ಮಲ್ಲಿಗೆಯ ಘಮಲು ಬೀರಿದ ಪ್ರೇಮಕವಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯವರಾದ ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಈ ಸಂಚಿಕೆಯನ್ನು ಮುಡಿಪಿಡಲಾಗಿದೆ. ಈ ನಿಮಿತ್ತ ನಡೆಯುವ ಮಹಾ ಕವಿತೆಗಳ ವಾಚನ ಮತ್ತು ಹಾಡುಗಾರಿಕೆ ನಡೆಯಲಿದ್ದು, ಪಿಇಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.ಎಸ್.ಬಿ.ಶಂಕರಗೌಡರು ಹಾಡು – ಕವಿತೆಗಳ ಅನುಸಂಧಾನ ನಡೆಸಿಕೊಡಲಿದ್ದಾರೆ ಎಂದು ಪರಿಚಯ ಪ್ರಕಾಶನದ ಸಂಸ್ಥಾಪಕರಾದ ಶಿವಕುಮಾರ ಆರಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಜೆ ಐದು ಗಂಟೆಯಿಂದ ಆರಂಭವಾಗುವ ಸಂಗೀತ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಮತ್ತು ಕೆ.ಎಸ್.ನರಸಿಂಹಸ್ವಾಮಿ ಅವರ ಪ್ರಸಿದ್ಧ ಭಾವಗೀತೆಗಳನ್ನು ಮಂಡ್ಯ ಜಿಲ್ಲೆಯ ಹೆಮ್ಮೆಯ ಹಾಡುಗಾರರಾದ ಗಾಮನಹಳ್ಳಿ ಸ್ವಾಮಿ, ಪ್ರತಿಭಾಂಜಲಿ ಡೇವಿಡ್ ಮತ್ತು ಎಚ್.ಎನ್.ದೇವರಾಜು ಅವರು ಪ್ರಸ್ತುತಪಡಿಸಲಿದ್ದಾರೆ. ಮಂಡ್ಯದ ಹೆಚ್ಚುವರಿ ಸರ್ಕಾರಿ ನ್ಯಾಯವಾದಿಗಳಾದ ಶ್ರೀಮತಿ ರತಿಕುಮಾರಿ, ಉಪನ್ಯಾಸಕಿ ಶಾಲಿನಿ ಎಚ್.ಎಸ್. ಮತ್ತು ಶಿಕ್ಷಕರಿ ಶ್ವೇತಾ ಕೆ. ಅವರುಗಳು ಅಪರೂಪದ ಕವಿತೆಗಳ ವಾಚಿಸಲಿದ್ದು, ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆಯ ಅರವಿಂದ ಪ್ರಭು ಸಮನ್ವಯ ಮಾಡಲಿದ್ದಾರೆ.
ಬೇಂದ್ರೆ – ಕೆಎಸ್ನ ಅವರ ಕನ್ನಡ ಪ್ರಜ್ಞೆ ಮತ್ತು ಭಾವಪ್ರಪಂಚವನ್ನು ಹೊಸತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು ಸಾಹಿತ್ಯ ಮತ್ತು ಸಂಗೀತಾಭಿಮಾನಿಗಳು ಭಾಗವಹಿಸಬಹುದು ಎಂದು ಪರಿಚಯ ಪ್ರಕಾಶನ ಪ್ರಕಟಣೆಯಲ್ಲಿ ತಿಳಿಸಿದೆ


