ಆಸ್ಪತ್ರೆಯಲ್ಲಿ ಕಾರಾಗೃಹ ಆರೋಪಿಗೆ ಅನಧಿಕೃತ ಚಿಕಿತ್ಸೆ ನೀಡಿದ ವೈದ್ಯಕೀಯ ಅಧೀಕ್ಷಕ ಡಾ ಶಿವಕುಮಾರ್ ಅಮಾನತ್ತಿಗೆ ಆಗ್ರಹ
ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಾರಾಗೃಹ ಆರೋಪಿಗೆ ಅನಧಿಕೃತವಾಗಿ ಚಿಕಿತ್ಸೆ ನೀಡಿ ದ್ವಂದ್ವ ಹೇಳಿಕೆ ನೀಡುತ್ತಿರುವ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಅಮಾನತ್ತುಗೊಳಿಸಿ ಇಲಾಖಾ ತನಿಖೆ ನಡೆಸುವಂತೆ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ಮುದ್ದೇಶಿಸಿ ಮಾತನಾಡಿದ ಅವರು
ಈ ಸಂಬಂದ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮಿಂಚಂಚೆ ಮೂಲಕ ದೂರು ದಾಖಲಿಸಲಾಗಿತ್ತು.ದೂರಿನ ಹಿನ್ನೆಲೆಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ನೀಡಿರುವ ಲಿಖಿತ
ಪ್ರತಿಕ್ರಿಯೆಯಲ್ಲಿ ಆರೋಪಿ ಅಧಿಕಾರಿ ಮಹಮ್ಮದ್ ಹುಸೇನ್ ಗೆ ಎಡ ಭಾಗದ ಸಯಾಟಿಕ ಇರುವುದು ಕಂಡು ಬಂದಿರುತ್ತದೆ ಎಂದು ಹೇಳಿದ್ದಾರೆ.
ಆದರೆ ಈ ಸಯಾಟಿಕ ಸಮಸ್ಯೆ ಕಂಡು ಬಂದಲ್ಲಿ ಇದಕ್ಕೆ ಪೂರಕವಾಗಿ ಆರೋಪಿ ಅಧಿಕಾರಿಯ ಎಕ್ಸ್ ರೆ ಇಲ್ಲವೆ ಎಂ ಆರ್ ಐ ಪರೀಕ್ಷೆ ನಡೆಸಿರುವ ಕುರಿತು ಯಾವುದೆ ಪ್ರಸ್ತಾವವನ್ನು ತಮ್ಮ ಲಿಖಿತ ಉತ್ತರದಲ್ಲಿ ಶಿವಕುಮಾರ್ ದಾಖಲಿಸಿರುವುದಿಲ್ಲ.
ಈ ಯಾವುದೆ ಪರೀಕ್ಷೆ ನಡೆಸದೆ ಸಯಾಟಿಕ ಸಮಸ್ಯೆ ಇದೆ ಎಂಬುದು ವೈದ್ಯರು ಬರೇ ರೋಗಿಯ ಹೇಳಿಕೆಯಿಂದಲೆ ಕಂಡುಕೊಂಡರೆ ಎಂದು ಅವರು ಪ್ರಶ್ನಿಸಿದರು.
ಈ ಸಂಬಂದ ಸದರಿ ಆರೋಪಿ ಅಧಿಕಾರಿಗೆ ಈ ಹಿಂದೆ ಸಯಾಟಿಕ ಸಮಸ್ಯೆ ಇದ್ದುದ್ದರ ಕುರಿತು ಯಾವುದೆ ಪ್ರಸ್ತಾಪವಿಲ್ಲ.ರೋಗ ಇತಿಹಾಸದ ದಾಖಲೆಗಳು ಇಲ್ಲವಾಗಿದೆ.
ಇದಲ್ಲದೆ ಜೈಲು ವಾರ್ಡ್ ಎಂದು ಇವರು ಗುರುತಿಸಿರುವ ಕೊಠಡಿಗೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಧಿಡೀರ್ ಭೇಟಿ ನೀಡಿದ ನಂತರ ಒಂದು ಬಿಳಿ ಹಾಳೆಯಲ್ಲಿ ಜೈಲ್ ವಾರ್ಡ್ ಎಂದು ಅಂಟಿಸಲಾಗಿದೆ ವಿನಾ ಅದಕ್ಕು ಮೊದಲು ಈ ವಾರ್ಡುನ್ನು ಜೈಲು ವಾರ್ಡ್ ಎಂದು ಸಾರ್ವಜನಿಕವಾಗಿ ಯಾವುದೆ ನಾಮಫಲಕ ಹಾಕಿರಲಿಲ್ಲವೇಕೆ?
ಮುಂದುವರಿದು ಅವರು ಆರೋಪಿ ಅಧಿಕಾರಿಯನ್ನು 21/8/2026 ರಂದು ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿ ನಂತರ 24/08/2026 ರಂದು ಬಿಡುಗಡೆಗೊಳಿಸಿ ಜೈಲಿಗೆ ಕಳುಹಿಸಲಾಯಿತು ಎಂದು ಹೇಳಿಕೆ ದಾಖಲಿಸಿದ್ದಾರೆ.
ವಾಸ್ತವದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಹಾಗೂ ಜಿಲ್ಲಾ ನ್ಯಾಯಾಧೀಶರು ಆಸ್ಪತ್ರೆಯ ಪರೀಶೀಲನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು.ಆಗ ಸ್ವತಃ ವೈದ್ಯಕೀಯ ಅಧೀಕ್ಷಕರು ಸದರಿ ಆರೋಪಿಗೆ ಯಾವುದೆ ಗಂಭೀರ ಖಾಯಿಲೆ ಇಲ್ಲವೆಂದು ಬಲವಂತವಾಗಿ ಇಲ್ಲಿ ದಾಖಲಾಗಿದ್ದಾರೆಂದು ಹೇಳಿಕೆ ನೀಡಿರುತ್ತಾರೆ.
ಮಿಮ್ಸ್ ನಿರ್ದೇಶಕರಿಗೆ ನೀಡಿರುವ ಹೇಳಿಕೆಯಲ್ಲಿ ಸದರಿ ಆರೋಪಿಗೆ ಸಯಾಟಿಕ ಸಮಸ್ಯೆ ಇತ್ತೆಂದು ದ್ವಂದ್ವ ಹೇಳಿಕೆ ನೀಡಿದ್ದಾರೆ.ಅಲ್ಲದೆ ಕಾನೂನು ಸೇವಾ ಪ್ರಾಧಿಕಾರದ ಪರೀಶೀಲನೆಯಲ್ಲಿ ಈ ಪ್ರಕರಣ ಆಚೆ ಬಂದುದನ್ನು ಅವರು ಉದ್ದೇಶಪೂರ್ವಕವಾಗಿ ಮರೆ ಮಾಚುತ್ತಾರೆ.
ಕಳೆದ ಆಗಸ್ಟ್ ನಲ್ಲಿ ಆರೋಪಿಯನ್ನು ಬಂಧಿಸಿದಾಗ ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ ವೈದ್ಯರು ಸದರಿ ಆರೋಪಿಯ ಆರೋಗ್ಯ ತಪಾಸಣೆ ನಡೆಸಿ ಯಾವುದೆ ಗಂಭೀರ ಖಾಯಿಲೆ ಇಲ್ಲವೆಂದು ದಾಖಲಿಸಿರುತ್ತಾರೆ.
ಸ್ವತಃ ಆರೋಪಿಯು ತಾನೂ ಸಯಾಟಿಕ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ಯಾವುದೆ ಪ್ರಸ್ತಾಪವನ್ನು ಮಾಡಿರುವುದಿಲ್ಲ.
ಇದೆಲ್ಲವನ್ನು ಗಮನಿಸಿದಾಗ ಇಡೀ ಪ್ರಕರಣದಲ್ಲಿ ಅಧೀಕ್ಷಕ ಡಾ.ಶಿವಕುಮಾರ್ ಆರೋಪಿಯೊಂದಿಗೆ ಶಾಮೀಲಾಗಿ ಹಣ ಮತ್ತಿತರ ಪ್ರಭಾವಕ್ಕೆ ಒಳಗಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆರೋಪಿಗೆ ಅಕ್ರಮ ಎಸಗಲು ಕಾರಣವಾಗಿರುತ್ತಾರೆ.ಇದಲ್ಲದೆ ಕರ್ತವ್ಯದ ವೇಳೆಯಲ್ಲಿ ವೈದ್ಯರು ಖಾಸಗಿ ನರ್ಸಿಂಗ್ ಹೋಂಗಳಿಗೆ ತೆರಳುವುದು.ನಾನ್ ಪ್ರಾಕ್ಟೀಸ್ ಭತ್ಯೆ ಪಡೆದು ಸಹ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕರ್ತವ್ಯ ನಿರ್ವಹಿಸುವುದನ್ನು ನಿಯಂತ್ರಿಸುವಲ್ಲಿ ಅಧೀಕ್ಷಕರು ವಿಫಲರಾಗಿದ್ದಾರೆ.ಈ ಸಂಬಂದ ದಾಖಲೆ ಸಹಿತ ದೂರು ನೀಡಿದರೂ ಕ್ರಮ ಕೈಗೊಳ್ಳದೆ ತಾವೊಬ್ಬ ಅದಕ್ಷ ಅಧಿಕಾರಿ ಎಂದು ಸಾಬೀತು ಮಾಡಿಕೊಂಡಿದ್ದಾರೆ.
ವೈದ್ಯರ ಮೇಲೆ ಸಾರ್ವಜನಿಕರು ಪ್ರಶ್ನಾತೀತ ನಂಬಿಕೆ ಹೊಂದಿದ್ದು ಅನಧಿಕೃತ ಚಿಕಿತ್ಸೆ ಮತ್ತು ದ್ವಂದ್ವ ಹೇಳಿಕೆ ವೈದ್ಯ ವೃತ್ತಿಯ ನೈತಿಕತೆಗೆ ಕೊಟ್ಟ ದೊಡ್ಡ ಪೆಟ್ಟಾಗಿದೆ.ಭವಿಷ್ಯದಲ್ಲಿ ಸಾರ್ವಜನಿಕರು ವೈದ್ಯರನ್ನು ಸದಾ ಸಂಶಯಿಸುವ ಪ್ರವೃತ್ತಿಗೆ ನಾಂದಿ ಹಾಡಿದೆ.
ಈಗಾಗಲೇ ಈ ಪ್ರಕರಣ ಸಂಬಂದ ಜೈಲು ಅಧಿಕಾರಿಯನ್ನು ಬಳ್ಳಾರಿಗೆ ವರ್ಗಾಯಿಸಿ ಕಾವಲು ಪೇದೆಯನ್ನು ಅಮಾನತ್ತು ಮಾಡಿ ಬಂಧಿಖಾನೆ ಇಲಾಖೆ ತನಿಖೆ ಆರಂಭಿಸಿದೆ.
ಉಪ ಲೋಕಾಯುಕ್ತರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.ಈ ಸಂಧರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮೌನವಹಿಸುವ ಬದಲು ಇಲಾಖಾ ತನಿಖೆ ಎರ್ಪಾಡು ಮಾಡಬೇಕು.ನಿಷ್ಪಕ್ಷಪಾತ ತನಿಖೆಗಾಗಿ ವೈದ್ಯಕೀಯ ಅಧೀಕ್ಷಕರನ್ನು ಅಮಾನತ್ತುಗೊಳಿಸುವಂತೆ ಕೋರುತ್ತೇನೆ.ಈ ಸಂಬಂದ ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿ ಮಾಡಲಾಗುವುದು ಎಂದರು
*ಒತ್ತುವರಿ ತೆರವು ಉಪವಾಸ* ಸತ್ಯಾಗ್ರಹದಲ್ಲಿ ಭಾಗೀ*
ಮೆಡಿಕಲ್ ಕಾಲೇಜಿಗೆ ಸೇರಿದ ೧೯ ಎಕರೆ ಒತ್ತುವರಿ ತೆರವುಗೊಳಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ ಧೋರಣೆಯ ವಿರುದ್ದ ಜಿಲ್ಲಾಧಿಕಾರಿ ಕಚೇರಿ ಎದುರು ಸೆ 7ರಿಂದ ನಡೆಯಲಿರುವ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಕನ್ನಡಪರ ಸಂಘಟನೆಗಳು ಸಕ್ರಿಯವಾಗಿ ತೊಡಗಿಕೊಳ್ಳಲಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ತಿಳಿಸಿದರು.ಇದೇ ವೇಳೆ ಮಾತನಾಡಿದ ಅವರು.
ಮಿಮ್ಸ್ ಆಸ್ಪತ್ರೆಯಲ್ಲಿ ೫೦ ಕ್ಕು ಹೆಚ್ಚು ತಜ್ನ ವೈದ್ಯರ ಕೊರತೆಯಿದ್ದು ಈ ಸಂಬಂದ ಆಸಕ್ತಿವಹಿಸಿ ಅಗತ್ಯ ತಜ್ನ ವೈದ್ಯರ ನೇಮಕಕ್ಕೆ ಜನಪ್ರತಿನಿಧಿಗಳು ದನಿಗೂಡಿಸಬೇಕು.
ಒತ್ತುವರಿ ತೆರವುಗೊಳಿಸುವುದರಿಂದ ಹೃದ್ರೋಗ ಸೇರಿದಂತೆ ಹಲವು ಖಾಯಿಲೆಗಳಿಗೆ ಮಂಡ್ಯದಲ್ಲೆ ಚಿಕಿತ್ಸೆ ಒದಗಿಸಬಹುದಾಗಿದೆ.ಜಿಲ್ಲೆಯ ಜನಪ್ರತಿನಿಧಿಗಳು ಮತಬ್ಯಾಂಕ್ ರಾಜಕಾರಣ ಬಿಟ್ಟು ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ದಿಗೆ ಕೈ ಜೋಡಿಸಬೇಕೆಂದು ಆಗ್ರಹಿಸಿದರು
ಗೋಷ್ಡಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲೇಶ್.ರಾಜ ವೆಂಕಟೇಶ್.ವೆಂಕಟೇಶ್. ಗೋವಿಂದರಾಜು. ಸೋಮಶೇಖರ. ರಾಜೇಂದ್ರ ಬಾಬು ಉಪಸ್ಥಿತರಿದ್ದರು


