*ಆಸ್ಪತ್ರೆ ಅವ್ಯವಸ್ಥೆ ಉಪ ಲೋಕಾಯುಕ್ತ ಅಸಮಾಧಾನ*
ನಾಗಮಂಗಲ: ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ ವೀರಪ್ಪ ಮತ್ತು ಅಧಿಕಾರಿಗಳ ತಂಡವು ಅಲ್ಲಿನ ತೀವ್ರ ದುರವಸ್ಥೆ ಮತ್ತು ಅವ್ಯವಸ್ಥೆಯನ್ನು ಕಂಡು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಆಸ್ಪತ್ರೆಯ ವಾರ್ಡ್ಗಳನ್ನು ಮತ್ತು ರೋಗಿಗಳಿಗೆ ವಿತರಿಸುತ್ತಿರುವ ಔಷಧಗಳನ್ನು ಪರಿಶೀಲಿಸಿದ ಅವರು ಅಲ್ಲಿನ ಆಡಳಿತ ಮಂಡಳಿ ಹಾಗೂ ವೈದ್ಯರ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
”ಇಂಪ್ರೂವ್ಮೆಂಟ್ ಇಲ್ಲ”: ಆಸ್ಪತ್ರೆಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ಸುಧಾರಣೆ ಕಂಡುಬಂದಿಲ್ಲ. ರೋಗಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಆಸ್ಪತ್ರೆಯ ಅನೈರ್ಮಲ್ಯ ಮತ್ತು ಆಡಳಿತ ಅವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದ ಅಧಿಕಾರಿಗಳು, “ನಮ್ಮ ಕಡೆ ದನಗಳನ್ನು ಸಾಕುವ ಕೊಟ್ಟಿಗೆಯೂ ಇದಕ್ಕಿಂತ ಉತ್ತಮವಾಗಿರುತ್ತದೆ, ಆಸ್ಪತ್ರೆಯನ್ನು ದನಗಳ ಕೊಟ್ಟಿಗೆಯಂತೆ ಇಟ್ಟುಕೊಂಡಿದ್ದೀರಿ” ಎಂದು ನೇರವಾಗಿಯೇ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಯನ್ನು ಸಾಲಾಗಿ ನಿಲ್ಲಿಸಿ, ರೋಗಿಗಳ ದಾಖಲಾತಿ ಮತ್ತು ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಸುದೀರ್ಘವಾಗಿ ಪ್ರಶ್ನಿಸಿ ತನಿಖೆ ನಡೆಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ನೈರ್ಮಲ್ಯ ಹಾಗೂ ಸೂಕ್ತ ರೋಗ ರಕ್ಷಣಾ ವ್ಯವಸ್ಥೆ ಇಲ್ಲದಿರುವುದಕ್ಕೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಆಸ್ಪತ್ರೆಯ ಸುಧಾರಣೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.


