Saturday, July 27, 2024
spot_img

ಕಾಂಗ್ರೆಸ್ ಗೆಲುವಿನ ಹಿಂದೆ “ಎದ್ದೇಳು ಕರ್ನಾಟಕ ಪಾತ್ರ ಆಪಾರ ;ಪೂರ್ಣಿಮ ಅಭಿಮತ

ಮೇ.೨೩;
ಮಂಡ್ಯ:ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಕಂಟಕವಾಗಿದ್ದ ಬಿಜೆಪಿ ಸೋತು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ವಿಜಯವು ಕಾಂಗ್ರೆಸ್ ಪಕ್ಷದ ವಿಜಯ ಮಾತ್ರವಾಗಿರದೆ ಇಡೀ ನಾಡಿನ ಜನತೆಯ ವಿಜಯವಾಗಿದೆ. ಈ ನಿಟ್ಟಿನಲ್ಲಿ ‘ಎದ್ದೇಳು ಕರ್ನಾಟಕ’ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ.ಈ ವಿಜಯದ ನಿಮಿತ್ತ ರಾಜ್ಯಮಟ್ಟದ ಅಭಿನಂದನಾ ಸಮಾವೇಶ ಮೇ.೨೬ ರ ಶುಕ್ರವಾರ ಬೆಂಗಳೂರಿನ ಸ್ಕೌಟ್ಸ್ ಅಂಡ್ಸ್ ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಜಿ.ಪೂರ್ಣಿಮಾ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ಚುನಾವಣೆಯಲ್ಲಿ ೧೧೨ ಪ್ರಗತಿಪರ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳ ಐಕ್ಯ ವೇದಿಕೆಯಾಗಿ ಹೊರಹೊಮ್ಮಿದ ‘ಎದ್ದೇಳು ಕರ್ನಾಟಕ’ ತಳ ಸಮುದಾಯಗಳನ್ನು ಜಾಗೃತಗೊಳಿಸುವುದರಲ್ಲಿ ವಿಶೇಷ ಪಾತ್ರ ನಿರ್ವಹಿಸಿತು. ಜನರಲ್ಲಿ ಮಡುಗಟ್ಟಿದ್ದ ಅಸಮಾಧಾನ, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಗಳು ಹಾಗೂ ಸಾಮಾಜಿಕ ಚಳವಳಿಗಳು ರೂಪಿಸಿದ ಜನಜಾಗೃತಿ ಎಲ್ಲವೂ ಸೇರಿ ಬಿಜೆಪಿಯನ್ನು ಮಣಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಂವಿಧಾನ ವಿರೋಧಿ ಶಕ್ತಿಗಳಿಂದ ನಾಡನ್ನು ರಕ್ಷಿಸಲು ದುಡಿದ ಕೈಗಳನ್ನು ಗೌರವಿಸುವ, ಅಭಿನಂದಿಸುವ ಕಾರಣಕ್ಕಾಗಿ ‘ಎದ್ದೇಳು ಕರ್ನಾಟಕ’ ದ ವತಿಯಿಂದ ‘ಅಭಿನಂದನಾ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದೆ. ಮೇ ೨೬ ಸ್ವಾತಂತ್ರ‍್ಯ ಸೇನಾನಿ ಎಚ್.ಎಸ್. ದೊರೆಸ್ವಾಮಿಯವರು ನಮಗೆ ಜವಾಬ್ದಾರಿಯನ್ನಿತ್ತು ನಮ್ಮನ್ನಗಲಿ ಎರಡು ವರುಷಗಳಾಗುತ್ತಿವೆ. ಈ ಹಿರಿಯ ಚೇತನಕ್ಕೆ ಘನತೆಯ ನಮನ ಸಲ್ಲಿಸುವ, ಬಹುತ್ವ ಮೌಲ್ಯಗಳ ಸಂಭ್ರಮ ಮತ್ತು ಜನಸಾಮಾನ್ಯರ ನಿರೀಕ್ಷೆಗಳ ಕಡೆ ಸರ್ಕಾರದ ಗಮನ ಸೆಳೆಯುವುದು ಈ ಅಭಿನಂದನಾ ಸಮಾವೇಶದ ಮುಖ್ಯ ಉದ್ದೇಶಗಳಾಗಿವೆ ಎಂದು ವಿವರಿಸಿದರು.
ಈ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜನ ಚಳುವಳಿಯ ಏಕೈಕ ಪ್ರತಿನಿಧಿ ದರ್ಶನ್ ಪುಟ್ಟಣ್ಣಯ್ಯ ಅವರನ್ನೂ ಒಳಗೊಂಡಂತೆ ಕಾಂಗ್ರೆಸ್ ಪಕ್ಷದ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಈ ಸಂದರ್ಭದಲ್ಲಿ ಜನತೆಯ ಆಶೋತ್ತರಗಳ ನಿರೀಕ್ಷಾ ಪತ್ರವನ್ನೂ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಸಲ್ಲಿಸಲಾಗುತ್ತದೆ ಎಂದರು.
ರಾಜಕೀಯ ಘನತೆ ಎತ್ತಿ ಹಿಡಿಯುವ ಬದಲಾವಣೆ
ನಿವೃತ್ತ ಪ್ರಾಂಶುಪಾಲ ಹುಲ್ಲುಕೆರೆ ಮಹದೇವ ಮಾತನಾಡಿ ರಾಜಕೀಯ ಎಂಬುದು ಸಾಮಾಜಿಕ ಶಕ್ತಿ ಸಾಮರಸ್ಯ ಕಾಪಾಡಲು ಕಾನೂನು ಬಲವಿರುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಅರಾಜಕತೆ ವ್ಯಾಪಕವಾಗಿತ್ತು. ಜನರ ಸಮಸ್ಯೆಗೆ ಸ್ಪಂದನೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಜನತೆ ಕಾಂಗ್ರೆಸ್ಸನ್ನು ಆಯ್ಕೆಮಾಡಿ ಜನರ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ನಿಜವಾದ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಉದ್ಯಮ ಕ್ಷೇತ್ರವಾಗಿ ಮಾರ್ಪಾಡಾಗಿತ್ತು. ಇದನ್ನು ಸೇವಾಕ್ಷೇತ್ರವಾಗಿ ಬದಲಿಸುವ ದಿಕ್ಸೂಚಿ ಪ್ರಕಟವಾಗಿದೆ. ಮಂಡ್ಯ ಜಿಲ್ಲೆ ತನ್ನ ಸಹಜ ಸ್ಥಿತಿಗೆ ಮರಳಿದೆ. ರಾಜಕೀಯ ಘನತೆ ಎತ್ತಿ ಹಿಡಿಯುವ ರಾಜಕೀಯ ಬದಲಾವಣೆ ಮಂಡ್ಯದಲ್ಲಾಗಿದೆ. ಒಂದೇ ಪಕ್ಷಕ್ಕೆ ಸೀಮಿತ ಎಂಬ ಪೂರ್ವಗ್ರಹಪೀಡಿತ ಭಾವನೆಯನ್ನು ತೊಡೆದುಹಾಕಿದೆ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ವಕೀಲ ಬಿಟಿ.ವಿಶ್ವನಾಥ್,ಮಂಜುಳ,ಮಹಿಳಾ ಮುನ್ನಡೆ ಸೌಮ್ಯ, ವೈಮನ, ಚಂದ್ರಶೇಖರ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!