ಪತ್ರಕರ್ತರ ಸಂಘದಲ್ಲಿ ಅನರ್ಹರು:ಜಿಲ್ಲಾಧಿಕಾರಿಗೆ ದೂರು
ಪತ್ರಕರ್ತರ ಸಂಘದಲ್ಲಿ ಅನರ್ಹರಿಗೆ ಸದಸ್ಯತ್ವ ನೀಡಿ ಅರ್ಹರನ್ನು ಹೊರಗಿಟ್ಟಿರುವ ಕುರಿತು ಚಿತ್ರದುರ್ಗ ಜಿಲ್ಲೆಯ ಅರ್ಹ ಪತ್ರಕರ್ತರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಈ ಸಂಬಂದ ಚಿತ್ರದುರ್ಗದ ಪತ್ರಕರ್ತ ಮಾಲತೇಶ್ ಅರಸ್ ಮತ್ತು ಎಚ್ ಲಕ್ಷ್ಮಣ್ ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ಕಾರ್ಯನಿರತ ಪತ್ರಕರ್ತರನ್ನು ಕೈಬಿಟ್ಟು ಕಾರ್ಯ ಮರೆತವರಿಗೆ ಸದಸ್ಯತ್ವ ನೀಡಲಾಗಿದೆ.ಅನರ್ಹರನ್ನು ಕೈಬಿಟ್ಟು ಅರ್ಹ ಸದಸ್ಯರ ಸೇರ್ಪಡೆಯೊಂದಿಗೆ ಚುನಾವಣೆ ಪ್ರಕ್ರಿಯೆ ನಡೆಸುವಂತೆ ದೂರಿದ್ದಾರೆ.ಈ ಸಂಬಂದ ಚಿತ್ರದುರ್ಗ ಜಿಲ್ಲಾಧಿಕಾರಿಗಳು ರಾಜ್ಯ ಕಾರ್ಮಿಕ ಇಲಾಖೆಗೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಚೇರಿಗೆ ದೂರು ಪತ್ರ ರವಾನಿಸಿ ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ.
ಮಂಡ್ಯದಲ್ಲು ಅನರ್ಹರದ್ದೆ ಆಟ: ಕಾರ್ಯನಿರತ ಪತ್ರಕರ್ತರ ಸಂಘ ಟ್ರೇಡ್ ಯೂನಿಯನ್ ಆ್ಯಕ್ಟ್ ಅಡಿಯಲ್ಲಿ ನೋಂದಾಯಿತವಾಗಿದ್ದು ಕಾರ್ಮಿಕರಲ್ಲದ ಪತ್ರಿಕೆಗಳ ಮಾಲೀಕರು ಇಲ್ಲಿ ಸದಸ್ಯರಾಗುವಂತಿಲ್ಲ.ಆದರೆ ನಿಯಮ ಮೀರಿ ಸದಸ್ಯರಾಗಿ ಸಂಘವನ್ನು ಅಡ್ಡ ಹಾದಿಗೆ ಕೊಂಡೊಯ್ದಿದ್ದಾರೆಂದು ಹಿರಿಯ ಪತ್ರಕರ್ತ ಪುರುಷೋತ್ತಮ್ ಮತ್ತು ಯತೀಶ್ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.
ಟ್ರೇಡ್ ಯೂನಿಯನ್ ಕಾಯ್ದೆಯ ಪ್ರಕಾರ ನೋಂದಾಯಿತ ಸಂಘದಲ್ಲಿ ಕಾರ್ಮಿಕರಲ್ಲದವರು ಸದಸ್ಯರಾಗುವಂತಿಲ್ಲ.ಇದಲ್ಲದೆ ಪತ್ರಕರ್ತರೆ ಅಲ್ಲದ ಹಲವರಿಗೆ ಪತ್ರಕರ್ತರ ಹೆಸರಿನಲ್ಲಿ ಸದಸ್ಯತ್ವ ನೀಡಲಾಗಿದೆ.ಅರ್ಹರಿಗೆ ಸದಸ್ಯತ್ವ ನಿರಾಕರಿಸಿ ಚುನಾವಣೆ ಹೆಸರಿನಲ್ಲಿ ಸಂಘವನ್ನು ತಪ್ಪು ಹಾದಿಗೆ ಕೊಂಡೊಯ್ಯುತ್ತಿರುವುದರ ವಿರುದ್ದ ಕಾರ್ಮಿಕ ಇಲಾಖೆ ಹಾಗೂ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಪುರುಷೋತ್ತಮ್ ತಿಳಿಸಿದ್ದಾರೆ.ವಕೀಲರು ಬಿಲ್ಡರುಗಳು ಸೇರಿದಂತೆ ಪತ್ರಕರ್ತರೆ ಅಲ್ಲದ ಹಲವರಿಗೆ ಸದಸ್ಯತ್ವ ನೀಡಲಾಗಿದೆ.ಬಹುತೇಕರಿಗೆ ಯಾವುದೆ ನೇಮಕಾತಿ ಆದೇಶವೆ ಇಲ್ಲವಾಗಿದೆ.ಸರಕಾರದ ಅನುದಾನ ಪಡೆದರೂ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ನಿರಾಕರಿಸಲಾಗುತ್ತಿದೆ ಈ ಎಲ್ಲ ಕಾರಣಗಳಿಂದ ನ್ಯಾಯಾಲಯದ ಮೆಟ್ಟಿಲು ಏರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹಿನ್ನೆಲೆ ಏನು? ಸ್ವತಂತ್ರ ಪೂರ್ವದಲ್ಲಿ ಕಾರ್ಮಿಕ ಕಾಯ್ದೆಯನ್ವಯ ಸ್ಥಾಪಿತವಾಗಿರುವ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕೆಗಳ ಮಾಲೀಕರು ಆಡಳಿತ ಮಂಡಳಿ ಸದಸ್ಯರನ್ನು ಹೊರತುಪಡಿಸಿ ಸಂಪಾದಕರು ವರದಿಗಾರರು ಸದಸ್ಯರಾಗಲು ಬೈಲಾ ಪ್ರಕಾರ ಅವಕಾಶವಿದೆ.ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರ್ದಿಷ್ಟ ಗುಂಪುಗಳು ಕಾರ್ಯನಿರತ ಪತ್ರಕರ್ತರ ಸಂಘದ ಮೇಲೆ ಹಿಡಿತ ಸಾಧಿಸಿವೆ.ಅಯಾ ಜಿಲ್ಲೆಯ ರಾಜಕಾರಿಣಿಗಳೊಂದಿಗೆ ಪಕ್ಷಾತೀತವಾಗಿ ಸಖ್ಯ ಹೊಂದಿರುವ ಈ ಗುಂಪುಗಳು ತಮಗೆ ಬೇಕಾದವರಿಗೆ ತಮ್ಮನ್ನು ಬೆಂಬಲಿಸುವವರಿಗೆ ಸದಸ್ಯತ್ವ ನೀಡುವುದು ಪ್ರಶ್ನಿಸುವವರನ್ನು ಸದಸ್ಯತ್ವದಿಂದ ಹೊರಗಿಡುವ ಪ್ರಕ್ರಿಯೆಗಳನ್ನು ನಡೆಸುತ್ತಾ ಬಂದಿವೆ.ಇಲ್ಲು ಸಹ ಸಾರ್ವತ್ರಿಕ ಚುನಾವಣೆಗಳಂತೆ ಹಣ ಹೆಂಡದ ಸದ್ದು ಜೋರಾಗಿಯೆ ನಡೆಯುತ್ತದೆ.ಇವೆಲ್ಲದರಿಂದ ಬೇಸತ್ತ ಹಲವರು ಕೆಲ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಖೆ. ಜಿಲ್ಲಾಧಿಕಾರಿಗಳ ಕಚೇರಿ ಮತ್ತು ನ್ಯಾಯಾಲಯದಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.ಕೆಲವು ಪತ್ರಿಕೆಗಳ ಮಾಲೀಕರು ತಮ್ಮ ಪತ್ರಿಕಾ ಕಚೇರಿಯಲ್ಲಿ ಯಾವುದೆ ನೌಕರರು ಇಲ್ಲವೆಂದು ಕಾರ್ಮಿಕ ಇಲಾಖೆಗೆ ಪ್ರಮಾಣ ಪತ್ರ ಸಲ್ಲಿಸಿದ್ದರು ಪತ್ರಕರ್ತರ ಸಂಘದಲ್ಲಿ ಪ್ರತಿ ತಾಲೂಕಿನಲ್ಲು ತಮ್ಮ ವರದಿಗಾರರು ಇದ್ದಾರೆಂದು ಸದಸ್ಯತ್ವ ಕೊಡಿಸಿದ್ದಾರೆ.ಈ ರೀತಿಯ ಸದಸ್ಯತ್ವ ಕೊಡಿಸಿರುವ ಪತ್ರಿಕೆಗಳ ಮಾಲೀಕರು ನೇಮಿಸಿರುವ ವರದಿಗಾರರಿಗೆ ಕ್ರಮಬದ್ದ ಕನಿಷ್ಟ ವೇತನ ಭವಿಷ್ಯ ನಿಧಿ ಇಎಸ್ ಐ ಪಾವತಿಸುತ್ತಿರುವ ಬಗ್ಗೆ. ಪಾವತಿಸುತ್ತಿಲ್ಲವಾದಲ್ಲಿ ಅದರ ವಸೂಲಿಗೆ ಸಕ್ಷಮ ಪ್ರಾಧಿಕಾರದಲ್ಲಿ ಪ್ರಕರಣ ದಾಖಲಿಸಲು ಪುರುಷೋತ್ತಮ್ ತಂಡ ಪ್ರಯತ್ನ ನಡೆಸಿದೆ.
ಕಾರ್ಮಿಕ ಇಲಾಖೆ ಸಂಘದ ಬೈಲಾ ಪ್ರಕಾರ ಕಾರ್ಮಿಕರೆತ್ತರ ಪತ್ರಿಕೆಗಳ ಮಾಲೀಕರನ್ನು ಸದಸ್ಯತ್ವದಿಂದ ಹೊರಹಾಕಿ ನಿಷ್ಪಕ್ಷಪಾತ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.ಆದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಮೇಲೂ ರಾಜಕೀಯ ಪ್ರಭಾವ ಬೀರುತ್ತಿರುವುದರಿಂದ ನ್ಯಾಯಾಲಯದ ಮೆಟ್ಟಿಲು ಏರುವುದು ಅನಿವಾರ್ಯವೆಂದು ಹಿರಿಯ ಪತ್ರಕರ್ತ ಯತೀಶ್ ಪ್ರತಿಪಾದಿಸಿದ್ದಾರೆ.


