ಸಿ.ಟಿ.ರವಿ ವಿರುದ್ಧ ಸವಿತಾ ಸಮಾಜ ಪ್ರತಿಭಟನೆ
01/11/2025
ಮಂಡ್ಯ ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ನಿಷೇಧಿತ ಪದ ಬಳಸಿ ಸವಿತಾ ಸಮಾಜ ಅವಮಾನಿಸಿರುವುದನ್ನು ಖಂಡಿಸಿ, ಸವಿತಾ ಸಮಾಜದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು
ಮಂಡ್ಯ: ನಿಷೇಧಿತ ಪದ ಬಳಸಿ ಸವಿತಾ ಸಮಾಜವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಮಾನಿಸಿದ್ದಾರೆಂದು ಆರೋಪಿಸಿ ಜಿಲ್ಲಾ ಸವಿತಾ ಸಮಾಜ ಹಾಗೂ ಹಿಂದುಳಿದ ವರ್ಗಗಳ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ.ವೃತ್ತದಲ್ಲಿ ಒಗ್ಗೂಡಿದ ಪ್ರತಿಭಟನಾಕಾರರು, ಸಿ.ಟಿ.ರವಿ ಮತ್ತು ಜಾತಿವಾದಿಗಳ ವಿರುದ್ಧ ಘೋಷಣೆ ಕೂಗಿದರು.
ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುತ್ತುರಾಜ್ ಮಾತನಾಡಿ, ‘ಸ್ವಾಭಿಮಾನ, ಗೌರವ ಮತ್ತು ಪರಿಶ್ರಮದಿಂದ ಬದುಕುತ್ತಿರುವ ಸವಿತಾ ಸಮಾಜವನ್ನು ಅವಮಾನಿಸಿರುವ ಸಿ.ಟಿ.ರವಿ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಲಾಯಕ್ಕಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ‘ಸಿ.ಟಿ.ರವಿ ಅವರು ಸವಿತಾ ಸಮಾಜವನ್ನು ನಿಂದಿಸಿರುವುದು ದುರಂತ. ‘ಹಿಂದೂ ನಾವೆಲ್ಲ ಒಂದು’ ಎನ್ನುವವರು ಅತಿ ಹಿಂದುಳಿದವರನ್ನು ಅಪಮಾನಿಸುವುದು ನ್ಯಾಯವೇ? ಬಿಜೆಪಿ ನಿಮಗೆ ಇದನ್ನೇ ಹೇಳಿಕೊಟ್ಟಿರುವುದೇ’ ಎಂದು ಖಾರವಾಗಿ ಪ್ರಶ್ನಿಸಿದರು.
ಸವಿತಾ ಸಮಾಜದ ಮುಖಂಡ ಎಂ.ಬಿ.ಶಿವಕುಮಾರ ಮತ್ತು ಜಿಲ್ಲಾ ಸವಿತಾ ಸಮಾಜ ಸಂಘದ ಮಾಜಿ ಅಧ್ಯಕ್ಷ ಪ್ರತಾಪ್ ಮಾತನಾಡಿದರು.
ಗುರುಪ್ರಸಾದ್ ಕೆರಗೋಡು, ಕೆ.ಎಚ್.ನಾಗರಾಜು, ಎಂ.ಕೃಷ್ಣ, ಲಕ್ಷ್ಮಣ್ ಚೀರನಹಳ್ಳಿ, ಮೋಹನ್ ತಾಳಸಾಸನ, ಎನ್.ದೊಡ್ಡಯ್ಯ, ಜಿಲ್ಲಾ ಸಂಘದ ಅಧ್ಯಕ್ಷ ಜಯರಾಂ, ಮುಖಂಡರಾದ ವೈರಮುಡಿ, ಅರಕೆರೆ ರಮೇಶ್, ನಾಗರಾಜು, ಅನಿಲ್ಕುಮಾರ್ ಇದ್ದರು.


