ಹೊಳೆನರಸೀಪುರ: ಪಟ್ಟಣ ಪುರಸಭೆಯ ನೂತನ ಅಧ್ಯಕ್ಷರಾಗಿ ದೇವಾಂಗ ಜನಾಂಗದ ಎ. ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾದರು. ಪುರಸಭೆಯ ಆಡಳಿತಾವಧಿ ನ.8ಕ್ಕೆ ಮುಗಿಯುತ್ತಿದ್ದು, ಜಗನ್ನಾಥ್ ಒಂದು ದಿನದ ಅಧ್ಯಕ್ಷರಾಗಲಿದ್ದಾರೆ.
ಅಧ್ಯಕ್ಷ ಎಚ್.ಕೆ. ಪ್ರಸನ್ನ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರಿಂದ ಶುಕ್ರವಾರ ಚುನಾವಣೆ ನಡೆಯಿತು. ಪುರಸಭೆಯ ವಾರ್ಡ್ ನಂ 8ರ ಸದಸ್ಯ ಎ.ಜಗನ್ನಾಥ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಆಗಿದ್ದ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಘೋಷಿಸಿದರು. ಆಡಳಿತಾಧಿಕಾರಿ ನೇಮಕಕ್ಕೆ ನ್ಯಾಯಾಲಯದಲ್ಲಿ ತಡೆ ಸಿಕ್ಕರೆ ಇವರು ಅಧ್ಯಕ್ಷರಾಗಿ ಮುಂದುವರೆಯಲು ಅವಕಾಶ ಇರುತ್ತದೆ ಎಂದು ಅವರು ಹೇಳಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ದೇವಾಂಗ ಜನಾಂಗದ ಎ. ಜಗನ್ನಾಥ್ ಪಟ್ಟಣದಲ್ಲಿ ಸಾರ್ವಜನಿಕರಿಗೆ ಪುರಸಭೆಯಿಂದ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲು ಶ್ರಮಿಸುತ್ತೇನೆ ಎಂದರು.
ಪುರಸಭೆಯ ನೂತನ ತಂಡದ 5 ವರ್ಷದ ಆಡಳಿತ ನವಂಬರ್ 11, 2020 ಕ್ಕೆ ಪ್ರಾರಂಭವಾಗಿತ್ತು. ಒಟ್ಟು 58 ತಿಂಗಳ ಅವಧಿಗೆ 6 ಜನ ಅಧ್ಯಕ್ಷರಾದಂತಾಯಿತು. ನೂತನ ಅಧ್ಯಕ್ಷ ಎ. ಜಗನ್ನಾಥ್ ಅವರನ್ನು ಪುರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ಅಭಿಮಾನಿಗಳು, ಅಭಿನಂದಿಸಿದರು.


