Friday, October 25, 2024
spot_img

ಊರೆಲ್ಲ ಬೆತ್ತಲೆಯಾಗಿರುವಾಗ ಶಿಕ್ಷಕರು ಮಾತ್ರ ಬಟ್ಟೆ ಹಾಕಿಕೊಂಡಿರಬೇಕಾ? ವನಂ ಶಿವರಾಮು ಅಂಕಣ

ಊರೆ ಬೆತ್ತಲೆಯಾಗಿರುವಾಗ ಶಿಕ್ಷಕರು ಮಾತ್ರವೆ ಬಟ್ಟೆ ಹಾಕಿಕೊಂಡಿರಬೇಕಾ?

ಓಟು ಮಾರಿಕೊಂಡ ಶಿಕ್ಷಕರು.

ದಕ್ಷಿಣ ಶಿಕ್ಷಕರ ಚುನಾವಣೆಯ ಫಲಿತಾಂಶ ಬಂದನಂತರ ಇಲ್ಲಿಯ ಶಿಕ್ಷಕರು ಎರಡೂವರೆಯಿಂದ ಒಂಬತ್ತು ಸಾವಿರ ಹಣ, ವಾಚು,ಸೀರೆಗಳಿಗೆ ಮಾರಿಕೊಂಡಿದ್ದಾರೆ; ಇಂತಹ ಶಿಕ್ಷಕರು ಮಕ್ಕಳಿಗೆ ಇನ್ನೆಂತಹ ನೈತಿಕತೆಯನ್ನು ಕಲಿಸಿಯಾರು ಮುಂತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯಾಗಿ ಈಯಾಳಿಸಲಾಗುತ್ತಿದೆ.

ಮತಗಟ್ಟೆಯಲ್ಲಿ ಕೆಲವರು ತಮಗೆ ಹಣ ತಲುಪಿಲ್ಲ ಓಟು ಮಾಡುವುದೂ ಇಲ್ಲ ಎಂದು ಹಠ ಹಿಡಿದಿದ್ದರಂತೆ.ಪಕ್ಷದ ಕಾರ್ಯಕರ್ತರು ( ಶಿಕ್ಷಕರೂ ಇದ್ದಾರೆ) ಹಣ ಹಂಚಲು ಹೋದಾಗ ಹೆಣ್ಣು ಗಂಡಾದಿಯಾಗಿ ಯಾರೂ ಬೇಡ ಎಂದ ಉದಾಹರಣೆಯೇ ಇಲ್ಲವಂತೆ. ಅಲ್ಲದೆ, ಎರಡೂ ಕಡೆಯೂ ಹಣ ಇತ್ಯಾದಿ ಪಡೆದಿದ್ದಾರಂತೆ.ಅಭ್ಯರ್ಥಿಗಳೇನು ನಮ್ಮ ಹಾಗೆ ಗಂಟಲು ಶೋಷಣೆ ಮಾಡಿ ಸಂಪಾದಿಸಿದ್ದಾರೆಯೇ? ಎಂದವರೇ ಹೆಚ್ಚಂತೆ.
ಗುಂಡು ಪಾರ್ಟಿಗೆ ಹೋದವರು ಬಾಟಲ್ಲುಗಳನ್ನೂ ಬ್ಯಾಗಿಗೆ,ಜೇಬಿಗೆ ಇಳಿಸಿದ್ದಾರಂತೆ.

ರಾಜಕಾರಣಿಗಳು,ಮಠಗಳು,ಗುತ್ತಿಗೆದಾರರು,ಐಎಎಸ್ ಐಪಿಎಸ್ ಕೆಎಎಸ್ ಮೊದಲಾದ ಅಧಿಕಾರಿಗಳು,ವೈದ್ಯರು,ಇಂಜಿನಿಯರುಗಳು,ಶಿಕ್ಷಣ ಸಂಸ್ಥೆಗಳು, ಶಿಕ್ಷಕೇತರ ನೌಕರರು ಮೊದಲಾದವರು ಕೋಟಿಕೋಟಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಪ್ರತಿನಿತ್ಯದ ಸುದ್ದಿ.ಪ್ರಾಣ ಉಳಿಸಬೇಕಾದ ವೈದ್ಯನೇ ದುಡ್ಡಿಗಾಗಿ ಭ್ರೂಣ ಹತ್ಯೆಯಲ್ಲಿ ತೊಡಗಿರುವುದು,ಹೆಣವನ್ನೇ ಐಸಿಯುನಲ್ಲಿಟ್ಟುಕೊಂಡು ಚಿಕಿತ್ಸಾ ವೆಚ್ಚವೆಂದು ಲಕ್ಷಗಟ್ಟಲೆ ದೋಚಿದ್ದಲ್ಲದೆ ಹೆಣ ಕೊಡಲೂ ದುಡ್ಡಿಗೆ ಪೀಡಿಸುವುದು ನಮಗೆ ಅದು ಮಾಮೂಲು ಎನಿಸಿಬಿಡುತ್ತದೆ.ಇನ್ನು ಯಾವುದೇ ಕಛೇರಿಯಲ್ಲಿ ಹಣ ಕಾಣದ ಯಾವ ಕಡತವೂ ಮುಂದೆ ಹೋಗುವುದೇ ಇಲ್ಲ.ಸಂಚಾರಿ ಪೋಲೀಸರು ಅತ್ಯಂತ ಶ್ರಮವಹಿಸಿ ಚಾಲಕ ಮತ್ತು ವಾಹನಗಳ ತಪಾಸಣೆ ಮಾಡುವುದು ಜನರ ಪ್ರಾಣದ ಕಳಕಳಿಯಿಂದಲೇ ಏನಲ್ಲ ಎಂಬುದು ಗೊತ್ತಿರುವ ವಿಷಯ.ಪೋಲೀಸ್ ಕೇಸು ದಾಖಲಿಸಿದ ದೂರುದಾರ ಮತ್ತು ಆರೋಪಿ ಇಬ್ಬರೂ ಅಲ್ಲಿಂದ ಬಿಡಿಸಿಕೊಂಡು ಬಂದರೆ ಸಾಕಪ್ಪ ಎಂದು ಒದ್ದಾಡುವವರೇ ಹೆಚ್ಚು. ಪಿಎಚ್ ಡಿ ಪದವಿಗಳೇ ಮಾರಾಟಕ್ಕಿವೆ. ಕುಲಪತಿಯೇ ಕೋಟಿಗಟ್ಟಲೆ ಕೊಟ್ಟಿರುತ್ತಾನೆ. ಸರ್ಕಾರಿ ಕೆಲಸಗಳು, ವರ್ಗಾವಣೆ ಲಕ್ಷಗಳಿಂದ ಕೋಟಿಗಳ ವ್ಯವಹಾರದಲ್ಲಿ ನಡೆಯುತ್ತಿವೆ. ದೇವರು ಧರ್ಮದ ಹೆಸರಲ್ಲಿ ದರೋಡೆಯೇ ನಡೆಯುತ್ತಿದೆ.ಹೀಗೆ ಹೇಳುತ್ತಾ ಹೋಗಬಹುದು.ಆದರೆ ನಮ್ಮ ಸಮಾಜಕ್ಕೆ ಇವೆಲ್ಲ ಮಾಮೂಲು;ಶಿಕ್ಷಕ ಮಾತ್ರ ಪ್ರಾಮಾಣಿಕನಾಗಿರಬೇಕು ಎಂದು ಬಯಸುತ್ತದೆ.ಶಿಕ್ಷಕನೂ ಎಲ್ಲ ಕಛೇರಿಗಳಲ್ಲಿ ಕೊನೆಗೆ ತನ್ನದೇ ಸಂಬಳ ಭಡ್ತಿ ವರ್ಗಾವಣೆಗೂ ಮಾಮೂಲು ಕೊಡಲೇ ಬೇಕು.ಅಂಥ ಶಿಕ್ಷಕ ಮಾತ್ರ ಪವಿತ್ರವಾಗಿರಬೇಕು!ಹಾಗಂತ ನಾನು ಶಿಕ್ಷಕರನ್ನು ಸಮರ್ಥಿಸುತ್ತಿದ್ದೇನೆಂದು ಅರ್ಥವಲ್ಲ.ಕೋಟಿಗಳಲ್ಲಿ ಲಂಚ ಪಡೆಯುವ ರಾಜಕಾರಣಿ ಸಮಾಜಕ್ಕೆ ನೀತಿ ಹೇಳಬಹುದು, ಸಂಪತ್ತು ಲೈಂಗಿಕ ದುರಾಚಾರದಲ್ಲಿ ತೊಡಗಿರುವ ಸ್ವಾಮಿಗಳ ಪ್ರವಚನ ಕೇಳಿ ಅವರ ಕಾಲಿಗೆ ಬಿದ್ದು ಬರಬಹುದು,ಭ್ರಷ್ಟ ರಾಜಕಾರಣಿ,ಅಧಿಕಾರಿ ತಮ್ಮ ಮಕ್ಕಳಿಗೆ ಇನ್ನೇನು ಹೇಳಿಯಾರು ಎಂದು ಯಾರೂ ಅನ್ನರು.ಅದೇ ತಮ್ಮ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕ ಮಾತ್ರ ಓಟಿಗಾಗಿ ಪುಡಿಗಾಸೂ ಪಡೆಯಬಾರದು.ಇದು ನಮ್ಮ ಸಮಾಜ ಬಯಸುವುದು.ಶಿಕ್ಷಕ ಮಾತ್ರ ಪತಿವ್ರತಾ ಧರ್ಮ ಪಾಲಿಸಬೇಕು.

ಭ್ರಷ್ಟಾಚಾರ ಎಲ್ಲೆಡೆ ವ್ಯಾಪಕವಾಗಿ ಹಬ್ಬಿಬಿಟ್ಟಿದೆ.ಇಂತಹ ವಾತಾವರಣದಲ್ಲಿ ಶಿಕ್ಷಕ ಮಾತ್ರ ಪ್ರಾಮಾಣಿವಾಗಿರಬೇಕು ಎಂಬ ಅಭಿಪ್ರಾಯ ಪರಿಶೀಲನಾಯೋಗ್ಯವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!