Friday, October 18, 2024
spot_img

ಮಂಡ್ಯ:ಕೆ ಆರ್ ಎಸ್ ನಿಂದ ಒಂದು ಲಕ್ಷ‌ ಕ್ಯೂಸೆಕ್ ನೀರು ಬಿಡುಗಡೆ ಸಾಧ್ಯತೆ.ಪ್ರವಾಹ ಮುನ್ನೆಚ್ಚರಿಕೆ

*ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಮುಂಜಾಗ್ರತಾ ಕ್ರಮ ವಹಿಸಿ: ಡಾ: ಕುಮಾರ*

ಮಂಡ್ಯ.ಜು.19 (ಕರ್ನಾಟಕವಾರ್ತೆ):-
ಕೆ.ಆರ್.ಎಸ್ ಜಲಾಶಯ ಭರ್ತಿಯಾಗುತ್ತಿದ್ದು, ಜಲಾಶಯದ ಮಟ್ಟ 120 ಅಡಿ ದಾಟಿದ ನಂತರ ನದಿಗೆ ನೀರು ಬಿಡುಗಡೆ ಮಾಡಲಾಗುವುದು. ಈ ಸಂದರ್ಭದಲ್ಲಿ ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕೆ.ಆರ್.ಎಸ್ ನಿಂದ ಒಂದು‌ ಲಕ್ಷ ಕ್ಕಿಂತ ಹೆಚ್ಚಿನ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ ಸಂದರ್ಭದಲ್ಲಿ ನದಿ ಪಾತ್ರದಲ್ಲಿರುವ ಶ್ರೀರಂಗಪಟ್ಟಣ ತಾಲ್ಲೂಕಿನ- 53, ಪಾಂಡವಪುರ- 15, ಮಳವಳ್ಳಿ- 21 ಹಾಗೂ ಹೇಮಾವತಿ ಜಲಾಶಯಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೇಟೆ – 3 ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಗ್ರಾಮಗಳಿಗೆ ಖುದ್ದು ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಬೇಕು ಎಂದರು.

ಜಿಲ್ಲಾ ಮಟ್ಟದ ಜೊತೆಗೆ ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋಸ್೯ ಸಮಿತಿ ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾಲ ಕಾಲಕ್ಕೆ ಬಿಡುಗಡೆಯಾಗುವ ನೀರು, ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ತಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಎಂದರು.

*ಕಂಟ್ರೋಲ್ ರೂಮ್ ಸ್ಥಾಪನೆ*
ಜಿಲ್ಲೆಯಲ್ಲಿ ಯಾವುದೇ ಸ್ಥಳ ಅಥವಾ ಮನೆಗಳು ಪ್ರವಾಹಕ್ಕೆ ಸಿಲುಕಿದರೆ ರಕ್ಷಣೆಗಾಗಿ ಎಲ್ಲಾ ತಾಲ್ಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಬೇಕು. ಮಳೆ ಹಾಗೂ ನದಿಗಳಿಂದ ಯಾವುದೇ ಅಪಾಯಗಳು ಉಂಟಾದಾಗ ಕೂಡಲೇ ಕಂಟ್ರೋಲ್ ರೂಮ್ ಗೆ ಮಾಹಿತಿ ಸಲ್ಲಿಸುವುದರಿಂದ ಸಾರ್ವಜನಿಕರನ್ನು ಸಮಸ್ಯೆಯಿಂದ ಪಾರು ಮಾಡಬಹುದು. ಚೆಸ್ಕಾಂ ಹಾಗೂ ಕಾವೇರಿ ನೀರಾವರಿ ನಿಗಮದಿಂದಲೂ ಸಹ ಪ್ರತ್ಯೇಕ ಕಂಟ್ರೋಲ್ ರೂಂ ಸ್ಥಾಪನೆ ಮಾಡಬೇಕು ಎಂದರು.

ಪ್ರತಿ ತಾಲ್ಲೂಕಿಗೂ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಲಾಗಿದೆ. 3 ಹಂತಗಳಲ್ಲಿಯೂ ತಂಡಗಳನ್ನು ರಚಿಸಿಕೊಂಡು ಸಮನ್ವಯತೆಯಿಂದ ಸಹಕಾರ ಮನೋಭಾವದಿಂದ ಯಾವುದೇ ಸಮಸ್ಯೆ ಬಾರದಂತೆ ಕೆಲಸ ನಿರ್ವಹಿಸಿ ಎಂದರು.

ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳು ಹಾಗೂ ಕೃಷಿ ಬೆಳೆಗಳು ಮುಳುಗಡೆಯಾಗುವುದೋ ಅಂತಹ ಪ್ರದೇಶಗಳಿಗೆ ತಾಲ್ಲೂಕಿನ ಇಒಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಎಚ್ಚರಿಕಾ ಸೂಚನಾ ಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕರಲ್ಲಿ ಕರ ಪತ್ರ, ಟಾಮ್ ಟಾಮ್ ವಾಹನಗಳಲ್ಲಿ ವ್ಯಾಪಕ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.

ಕೆ ಆರ್ ಎಸ್ ಅಣೆಕಟ್ಟಿನ ನೀರಿನ ಮಟ್ಟ, ಒಳ ಹರಿವು, ಹೊರ ಹರಿವು ಎಷ್ಟಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ. ನದಿ ಅಕ್ಕ ಪಕ್ಕ ಇರುವಂತಹ ಗ್ರಾಮಗಳಿಗೆ ಮುನ್ನೆಚ್ಚರಿಕ ಕ್ರಮಗಳನ್ನು ಅನುಸರಿಸಲು ತಿಳಿಸುವಂತಹದ್ದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.

ಯಾವುದೇ ಅಪಾಯಗಳು ಸಂಭವಿಸುವುದಕ್ಕೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಅವಶ್ಯಕ ಸಿದ್ದತೆಯನ್ನು ಮಾಡಿಟ್ಟುಕೊಳ್ಳುವುದು ಸೂಕ್ತ. ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆಗಳು ಸ್ವಯಂ ಸೇವಕರು, ಈಜು ಪರಿಣತರ ಪಟ್ಟಿ, ಜೆ.ಸಿ.ಬಿ ಹಾಗೂ ಬೋಟ್ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೂ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನಾಲೆಗಳಿಗೆ ಬಿಟ್ಟಾಗ ಯಾವುದೇ ಕುಟುಂಬದ ಸ್ಥಳಾಂತರ ಘಟನೆಗಳು ನಡೆದಿಲ್ಲ. ಒಂದು ವೇಳೆ ತೀವ್ರ ಪ್ರವಾಹದಿಂದಾಗಿ ಯಾವುದೇ ಕುಟುಂಬವನ್ನು ಸ್ಥಳಾಂತರಿಸಬೇಕಾದರೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು ಎಂದರು.

ಸಾಕಷ್ಟು ಕಡೆ ತೀವ್ರ ಮಳೆ ಹಾಗೂ ನದಿ ನೀರಿನಿಂದ ರಸ್ತೆಗಳು ಜಲಾವೃತವಾದರೆ ಸಂಚಾರ ನಿರ್ಬಂಧ ಮಾಡಿ, ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು‌

ಜಲಾಶಯದಿಂದ ಕೃಷಿ ಭೂಮಿಗಳು ಪ್ರವಾಹದಿಂದ ಜಲಾವೃತವಾಗಿ ಬೆಳೆ ನಾಶವಾದರೆ ಕಾನೂನು ಬದ್ಧವಾಗಿ ಪರಿಹಾರ ನೀಡಲು ಅನುಕೂಲವಾಗುವಂತೆ ಮುಂಜಾಗ್ರತಾ ಕ್ರಮವಾಗಿ ಕೃಷಿ ಅಧಿಕಾರಿಗಳು ಕೃಷಿ ಭೂಮಿಯನ್ನು ಗುರುತಿಸಿ ಭಾವಚಿತ್ರಗಳನ್ನು ತೆಗೆದುಕೊಳ್ಳಬೇಕು. ಮುಳುಗಡೆಯಾದ ನಂತರ ಬೆಳೆಯ ಬಗ್ಗೆ ದಾಖಲೆ ಸಿಗುವುದಿಲ್ಲ ಹಾಗೂ ಪರಿಹಾರ ಒದಗಿಸುವುದು ಕಷ್ಟಕರ ವಾಗುತ್ತದೆ ಎಂದರು.

ಜಿಲ್ಲೆಯ ಜನ, ಪ್ರವಾಸಿಗರು ಹಾಗೂ ಅಣೆಕಟ್ಟಿನ ಸುರಕ್ಷತೆ ಮುಖ್ಯವಾಗಿದೆ. ಅಪಾಯದ ಸ್ಥಳಗಳಲ್ಲಿ, ಸೆಲ್ಫಿ ಪಾಯಿಂಟ್, ನದಿ ಪಾತ್ರದಲ್ಲಿ ಇರುವ ದೇವಸ್ಥಾನ, ಗಗನಚುಕ್ಕಿ ಜಲಪಾತ, ಮುತ್ತತ್ತಿ, ಮುಂತಾದ ಸ್ಥಳಗಳಲ್ಲಿ ಎಚ್ಚರಿಕಾ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿ. ಅವಶ್ಯಕವಿರುವ ಕಡೆ ಹೋಮ್ ಗಾರ್ಡ್ ವ್ಯವಸ್ಥೆ ಮಾಡಿ. ನದಿ ಪಾತ್ರದಲ್ಲಿರುವ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಭೇಟಿ ಅವಶ್ಯಕವಿರುವ ಕಡೆ ಅವರಿಗೆ ಸೂಕ್ತ ಮಾಹಿತಿಗಳನ್ನು ರವಾನಿಸಿ ಎಂದರು

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್ ಅವರು ಮಾತನಾಡಿ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿಯ ಪಿಡಿಒ, ಬಿಲ್ ಕಲೆಕ್ಟರ್, ವಾಟರ್ ಮ್ಯಾನ್ ಗಳೊಂದಿಗೆ ಸಭೆ ನಡೆಸಿ ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಪ್ರವಾಹದ ಸನ್ನಿವೇಶ ಎದುರಿಸಲು ಸದಾ ಸನ್ನದರಾಗಿರುವಂತೆ ನೋಡಿಕೊಳ್ಳಬೇಕು ಎಂದರು..

ಶ್ರೀರಂಗಪಟ್ಟಣದ ಗಂಜಾಂ, ಮಳವಳ್ಳಿಯ ಮುತ್ತತ್ತಿ ಹಾಗೂ ಗಗನಚುಕ್ಕಿ ಸೇರಿದಂತೆ ಜಿಲ್ಲೆಯ ಇನ್ನಿತರೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬಂದು ನೀರಿನಲ್ಲಿ ಈಜಾಡುವ ಸಾಧ್ಯತೆಯಿದೆ. ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಹೋಮ್ ಗಾಡ್ಸ್ ೯ ನಿಯೋಜಿಸಿಕೊಳ್ಳಿ ಎಂದರು.

ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಘುರಾಮ್ ಅವರು ಮಾತನಾಡಿ ಪ್ರವಾಹದ ಸಂದರ್ಭದಲ್ಲಿ ಯಾವುದೇ ತೊಂದರೆ ಕಂಡುಬಂದಲ್ಲಿ ತಕ್ಷಣ ಜಿಲ್ಲೆ ಯ ಅಥವಾ ತಾಲ್ಲೂಕು ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಎಂದರು

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!