ಮಂಡ್ಯ, ಜೂನ್ ೨೨: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಸೋಲಿನ ಕಾರಣಗಳೇನು ಎಂಬುದರ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಅಧ್ಯಕ್ಷತೆಯಲ್ಲಿ ಆತ್ಮಾವಲೋಕನ ಸಭೆಯಲ್ಲಿ ಸುದೀರ್ಘ
ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಪ್ರಮುಖ ಕಾರಣಗಳೇನು ಎಂಬುದ್ದರ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿದರು.
ಜಿಲ್ಲೆಯ ಎಲ್ಲಾ ಶಾಸಕರು ಪಕ್ಷದ ಮುಖಂಡರನ್ನು ಕಡೆಗಣಿಸಿದ್ದು, ಜತೆಗೆ ಬೂತ್ ವಾರು ಅಭ್ಯರ್ಥಿ ಪರ ವ್ಯಾಪಕ ಪ್ರಚಾರ ಕೈಗೊಳ್ಳದಿರುವುದು, ಜಾತಿ ಸಮೀಕರಣ, ಗ್ಯಾರಂಟಿ ಯೋಜನೆಗಳ ಫಲಾನುಭವಿ ಮಹಿಳೆಯರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಬಾರದಿರುವುದು, ಅಹಿಂದ ವರ್ಗಗಳ ಮತಗಳು ಕ್ರೂಢೀಕರಣವಾಗದಿರುವುದು, ಕೆಲ ಶಾಸಕರ ಅಸಂಬದ್ಧ ಹೇಳಿಕೆಗಳು, ಅಭ್ಯರ್ಥಿ ಸ್ಟಾರ್ ಚಂದ್ರು ಹೊಸ ಮುಖ ಎಂಬ ಅಪಪ್ರಚಾರ, ನೀರಿನ ವಿಚಾರ, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ನಾಮ ನಿರ್ದೇಶನ ಮಾಡದಿರುವುದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್-ಬಿಜೆಪಿ
ಮೈತ್ರಿ ಅಭ್ಯರ್ಥಿ ಎಂಬ ಘೋಷಣೆ ಹಾಗೂ ರೈತಸಂಘದ ಶೇ.30ಕ್ಕೂ ಹೆಚ್ಚಿನ ಪ್ರಮಾಣದ ಮತಗಳು ಮೈತ್ರಿ ಅಭ್ಯರ್ಥಿ ಪರವಾಗಿ ಚಲಾವಣೆಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರಾಭವಗೊಳ್ಳುವಂತಾಯಿತು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿಬಂದವು.
ಲೋಕಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಮುಂಬರುವ ಜಿ.ಪಂ, ತಾ.ಪಂ ಚುನಾವಣೆಗೆ ಇಂದಿನಿಂದಲೇ ಪಕ್ಷ ಸಂಘಟನೆ ಬಲಗೊಳಿಸುವ ಜತೆಗೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಕಲ್ಪಿಸುವ ಮೂಲಕ ಪಕ್ಷ ಸಂಘಟಿಸಬೇಕು ಎಂಬ ಅಭಿಪ್ರಾಯ ಕೇಳಿ ಬಂದಿತ್ತಲ್ಲದೇ, ಜಿಲ್ಲೆಯ ಶಾಸಕರು ತಮ್ಮ ವರ್ತನೆ ಬದಲಾಯಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಕಡೆಗಣಿಸದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಮುಂಬರುವ ಜಿ.ಪಂ, ತಾ.ಪಂ, ಗ್ರಾ.ಪಂ, ಡೇರಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗೆಲ್ಲುವತ್ತ ಗಮನಹರಿಸಬೇಕು ಎಂಬ ಸಲಹೆಗಳು ಸಭೆಯಲ್ಲಿ ಕೇಳಿಬಂದವು.
ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿಗಳಾದ ಕೊತ್ತತ್ತಿ ರಾಜು, ಸಿ.ಆರ್.ರಮೇಶ್, ಸಿ.ಎಂ.ದ್ಯಾವಪ್ಪ, ತಗ್ಗಹಳ್ಳಿ ಯಶೋಧ, ವೀಣಾ ಶಂಕರ್, ಅಜ್ಜಹಳ್ಳಿ ರಾಮಚಂದ್ರು, ಕೆ.ಎಂ.ದೊಡ್ಡಿ ಪುಟ್ಟರಾಮು, ಅಂತನಹಳ್ಳಿ ಬಸವರಾಜು, ಹಿಟ್ಟನಹಳ್ಳಿಕೊಪ್ಪಲು ನಾಗರಾಜು, ಗುರುರಾಜು, ಸುಂಡಹಳ್ಳಿ ಮಂಜುನಾಥ್, ನವೀನ್,
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ ಇತರರಿದ್ದರು.