ಪೊಲೀಸ್ ವರ್ಗಾವಣೆಯಲ್ಲಿ ಭ್ರಷ್ಟಾಚಾರಕ್ಕೆ ತಡೆ: ‘ಡಿಜಿಟಲ್ ಕೌನ್ಸಿಲಿಂಗ್’ಗೆ ಆಗ್ರಹಿಸಿ ಮಂಡ್ಯ ಲೋಕಾಯುಕ್ತ ಇನ್ಸ್ಪೆಕ್ಟರ್ ಪತ್ರ
ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆ ಮತ್ತು ರಾಜಕೀಯ ಹಸ್ತಕ್ಷೇಪವನ್ನು ತಡೆಗಟ್ಟಲು ಆಗ್ರಹಿಸಿ, ಮಂಡ್ಯ ಜಿಲ್ಲೆಯ ಕರ್ನಾಟಕ ಲೋಕಾಯುಕ್ತದ ಪೊಲೀಸ್ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ. ವಿ.ಪಿ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG & IGP) ಫೆಬ್ರವರಿ ೨೩, ೨೦೨೬ ರಂದು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ.
ಡಿವೈಎಸ್ಪಿ, ಪಿಐ, ಮತ್ತು ಪಿಎಸ್ಐ ದರ್ಜೆಯ ಅಧಿಕಾರಿಗಳು ಆಯಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಪಡೆಯಲು ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಲಂಚ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿವೆ. ಈ ಹಣವನ್ನು ಮರಳಿ ಗಳಿಸಲು ಅಧಿಕಾರಿಗಳು ಅಕ್ರಮ ಚಟುವಟಿಕೆಗಳಿಗೆ ಜೊತೆ ನೀಡುತ್ತಿದ್ದು, ಇದು ಇಲಾಖೆಯ ಘನತೆ ಹಾಗೂ ಪ್ರಾಮಾಣಿಕ ಅಧಿಕಾರಿಗಳ ನೈತಿಕತೆಯನ್ನು ಕುಗ್ಗಿಸುತ್ತಿದೆ ಎಂದು ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಅಬಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮಾದರಿಯಲ್ಲಿ ಪೊಲೀಸ್ ಇಲಾಖೆಯಲ್ಲೂ ಪಾರದರ್ಶಕವಾದ ‘ಡಿಜಿಟಲ್ ಕೌನ್ಸಿಲಿಂಗ್’ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕಾರ್ಯಾಂಗ ಮತ್ತು ಕಾರ್ಯಾಂಗೇತರ ಹುದ್ದೆಗಳ ಗರಿಷ್ಠ ಅವಧಿಯನ್ನು ೨ ವರ್ಷಗಳಿಗೆ ಸೀಮಿತಗೊಳಿಸಬೇಕು. ಒಬ್ಬ ಅಧಿಕಾರಿ ತನ್ನ ಒಟ್ಟು ಸೇವಾ ಅವಧಿಯಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ೩೦ ವರ್ಷದ ಸೇವೆಯಲ್ಲಿ ೧೦ ವರ್ಷ ಕಾರ್ಯಾಂಗೇತರ ಹುದ್ದೆಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು. ಸತತ ೨ ಕಾರ್ಯಾಂಗ ಹುದ್ದೆ (೪ ವರ್ಷ) ನಿರ್ವಹಿಸಿದ ನಂತರ, ಕನಿಷ್ಠ ೨ ವರ್ಷ ಕಾರ್ಯಾಂಗೇತರ ಹುದ್ದೆಯಲ್ಲಿ ಕೆಲಸ ಮಾಡಲೇಬೇಕು.
ಬೆಂಗಳೂರು ನಗರ ಹಾಗೂ ಇತರ ಕಮಿಷನರೇಟ್ ವ್ಯಾಪ್ತಿಯಲ್ಲಿ, ಹಾಗೆಯೇ ಒಂದೇ ಜಿಲ್ಲೆಯಲ್ಲಿ ಗರಿಷ್ಠ ೬ ವರ್ಷಗಳವರೆಗೆ ಮಾತ್ರ ಸೇವೆ ಸಲ್ಲಿಸಲು ಅವಕಾಶ ನೀಡಬೇಕು. ಒಂದೇ ಠಾಣೆಗೆ ಹಲವು ಅರ್ಜಿಗಳು ಬಂದಾಗ, ಅರ್ಜಿದಾರರ ಸೇವಾ ಹಿರಿತನದ ಆಧಾರದ ಮೇಲೆ ವರ್ಗಾವಣೆ ಮಾಡಬೇಕು. ಕರ್ತವ್ಯ ಲೋಪ ಇಲ್ಲವೇ ಕ್ರಿಮಿನಲ್ ಪ್ರಕರಣಗಳ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ವಿಚಾರಣೆ ಮುಗಿಯುವವರೆಗೆ ಕಡ್ಡಾಯವಾಗಿ ಕಾರ್ಯಾಂಗೇತರ ಹುದ್ದೆಯನ್ನೇ ನೀಡಬೇಕು.
ವರ್ಗಾವಣೆಗೆ ಯಾವುದೇ ರೀತಿಯ ಬಾಹ್ಯ ಇಲ್ಲವೇ ಶಿಫಾರಸು ಪತ್ರಗಳನ್ನು ತರುವ ಅಧಿಕಾರಿಗಳ ಎದುರು ಇಲಾಖಾ ಶಿಸ್ತು ಕ್ರಮ ಜರುಗಿಸಬೇಕು. ಈ ಎಲ್ಲಾ ನಿಬಂಧನೆಗಳನ್ನು ಒಳಗೊಂಡ ಒಂದು ಸಾಫ್ಟ್ವೇರ್ ಸಿದ್ಧಪಡಿಸಿ, ವರ್ಗಾವಣೆಯ ಸಂಪೂರ್ಣ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಆ ತಂತ್ರಾಂಶದ ಮೂಲಕವೇ ನಡೆಸಬೇಕು. ಈ ಕ್ರಮಗಳನ್ನು ಅಳವಡಿಸಿಕೊಂಡರೆ ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ, ನಿಷ್ಪಕ್ಷಪಾತ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ತರಬಹುದು ಹಾಗೂ ಸಾರ್ವಜನಿಕರಿಗೆ ಇಲಾಖೆಯ ಮೇಲಿನ ವಿಶ್ವಾಸ ಹೆಚ್ಚುತ್ತದೆ ಎಂದು ಅನಿಸಿಕೆ ಪಟ್ಟಿದ್ದಾರೆ.


