ನೌಕರರನ್ನು ವಜಾಗೊಳಿಸುವ ಮುನ್ನ ವಿಚಾರಣೆ ಕಡ್ಡಾಯ: ಕರ್ನಾಟಕ ಹೈಕೋರ್ಟ್ನ ಮಹತ್ವದ ತೀರ್ಪು
ಯಾವುದೇ ಉದ್ಯೋಗಿಯನ್ನು ಸೂಕ್ತ ಇಲಾಖಾ ವಿಚಾರಣೆ ನಡೆಸದೆ ಮತ್ತು ಅವರ ವಾದವನ್ನು ಆಲಿಸದೆ ಏಕಾಏಕಿ ಸೇವೆಯಿಂದ ವಜಾಗೊಳಿಸುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು ಮಹತ್ವದ ತೀರ್ಪು ನೀಡಿದೆ.
ಬೆಳಗಾವಿಯ ಗೋಕಾಕ್ ತಾಲೂಕಿನ ಸಂಜುಕುಮಾರ್ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. ಆದರೆ, ನಕಲಿ ಶೈಕ್ಷಣಿಕ ದಾಖಲೆ ನೀಡಿದ ಆರೋಪದ ಮೇಲೆ 2024ರ ಡಿಸೆಂಬರ್ 13ರಂದು ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.ನೌಕರನ ಮೇಲೆ ಗಂಭೀರ ಆರೋಪಗಳು ಇದ್ದಾಗ, ಅದು ಆತನ ವ್ಯಕ್ತಿತ್ವಕ್ಕೆ ಕಳಂಕ ತರುತ್ತದೆ. ಹೀಗಾಗಿ, ನೌಕರನಿಗೆ ತನ್ನ ವಾದ ಮಂಡಿಸಲು ಮುಕ್ತ ಅವಕಾಶ ನೀಡುವುದು ಮತ್ತು ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸುವುದು ಕಡ್ಡಾಯ ಎಂದು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ. ನೌಕರನು ಪ್ರೊಬೇಷನರಿ (ಖಾಯಂಪೂರ್ವ) ಅವಧಿಯಲ್ಲಿದ್ದರೂ, ವಜಾ ಆದೇಶವು ದಂಡನೆಯ ರೂಪದಲ್ಲಿದ್ದರೆ, ಅದಕ್ಕೂ ಮುನ್ನ ವಿಚಾರಣೆ ನಡೆಸಲೇಬೇಕು ಎಂಬ ಸುಪ್ರೀಂ ಕೋರ್ಟ್ನ ಮಹತ್ವದ ತೀರ್ಪನ್ನು ಹೈಕೋರ್ಟ್ ಇಲ್ಲಿ ಉಲ್ಲೇಖಿಸಿದೆ.
ನೌಕರನ ವಜಾ ಆದೇಶವನ್ನು ರದ್ದುಪಡಿಸಿರುವ ನ್ಯಾಯಾಲಯ, ತಕ್ಷಣವೇ ಅವರನ್ನು ಕೆಲಸಕ್ಕೆ ಮರುನೇಮಿಸಿ ಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನಿರ್ದೇಶನ ನೀಡಿದೆ. ಆದಾಗ್ಯೂ, ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯವನ್ನು ನಿಗಮಕ್ಕೆ ಮುಕ್ತವಾಗಿರಿಸಿದೆ. ಕಾರ್ಮಿಕರ ಹಕ್ಕುಗಳು ಮತ್ತು ಉದ್ಯೋಗ ಭದ್ರತೆಯ ದೃಷ್ಟಿಯಿಂದ ಇದೊಂದು ಅತ್ಯಂತ ಮಹತ್ವದ ತೀರ್ಪಾಗಿದೆ.


