ಮಂಡ್ಯ:ಎ೧೧. ಜಿಲ್ಲೆಯಲ್ಲಿ ಎಲ್ಲಂದರಲ್ಲಿ ಹೋಟೆಲ್, ರೆಸ್ಟೋರೆಂಟ್, ತಿಂಡಿ ತಿನಿಸು, ಮಾಂಸಾಹಾರ ಸೇರಿದಂತೆ ಆಹಾರ ಸಂಬಂಧಿತ ಅಂಗಡಿ ಮುಂಗಟ್ಟುಗಳು ತಲೆ ಎತ್ತುತ್ತಿದ್ದು ಇದಕ್ಕೆ ಆರೋಗ್ಯ ಇಲಾಖೆ ಹಾಗೂ ನಗರಸಭೆಯ ಆರೋಗ್ಯ ಪರೀವೀಕ್ಷಕರೆ ನೇರ ಹೊಣೆಯೆಂದು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕರಿ ರಮೇಶ್ ಆರೋಪಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ವ್ಯಾಪಾರ ಮಾಡುವವರು ನೋಂದಣಿ ಮಾಡಿಸಿ, ಕಡ್ಡಾಯವಾಗಿ ಆಹಾರ ಸ್ವಚ್ಛತಾ ಹಾಗೂ ಪರಿಸರ ನೈರ್ಮಲ್ಯ ಸಂಬಂಧಿತ ನಿಯಮಗಳನ್ನು ಪಾಲಿಸಬೇಕು.
ಜಿಲ್ಲೆಯ ಹಲವು ಆಹಾರ ಮಳಿಗೆಗಳು ನಿಯಮ ಪಾಲನೆ ಮಾಡದೇ ಇದ್ದು, ಗುಣಮಟ್ಟವಿಲ್ಲದ, ಅಸುರಕ್ಷಿತ ಆಹಾರ ತಯಾರಿಸಿ ವಿತರಣೆ ಮಾಡುತ್ತಿದ್ದಾರೆ ಎಂದು ದೂರಿದರು.
ಆಹಾರ ತಯಾರಿಕೆಗೆ ಸ್ವಚ್ಛತೆಯ ನಿಯಮಗಳನ್ನು ಪಾಲನೆ ಮಾಡದೇ ಇದ್ದು, ಪಡೆಯುವ ಹಣಕ್ಕೆ ಸರಿಯಾದ ಪ್ರಮಾಣದ ಆಹಾರ ಪದಾರ್ಥಗಳನ್ನು ನೀಡುತ್ತಿಲ್ಲ, ಅಲ್ಲದೇ ಅಪಾಯಕಾರಿ ರಾಸಾಯನಿಕ ಹಾಗೂ ಬಣ್ಣಗಳನ್ನು ಆಹಾರದಲ್ಲಿ ಸೇರಿಸಿ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ತಂದೊಡ್ಡುತ್ತಿದ್ದಾರೆ.
ಅದು ಮಾತ್ರವಲ್ಲದೇ ಸ್ವಚ್ಛತೆಯಿರದ ಕಡೆಗಳಲ್ಲಿ ಆಹಾರ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಹಾರ ಇಲಾಖೆಗೆ ಸಂಬಂಧಿತ ಅಧಿಕಾರಿಗಳು, ನಗರಸಭೆಯ ಆರೋಗ್ಯ ಪರಿವೀಕ್ಷಕರು ಉದಾಸೀನತೆ ತೋರುತ್ತಾ ಕಂಡು ಕಾಣದಂತೆ ಮೌನವಾಗಿದ್ದಾರೆ ಪರವಾನಗಿ ಪಡೆಯದೇ ಇಂದು ಎಲ್ಲೆಂದರಲ್ಲಿ ಆಹಾರ ತಯಾರಿಸುವ ಹೋಟಲ್, ಕೇಂದ್ರಗಳು ಆರಂಭಗೊಳ್ಳುತ್ತಿವೆ.
ಸಾರ್ವಜನಿಕರನ್ನು ಅನಾರೋಗ್ಯದ ಕೂಪಕ್ಕೆ ತಳ್ಳುತ್ತಿದ್ದಾರೆ. ಅಧಿಕಾರಿಗಳು ತಮಗೆ ಬೇಕಾದದ್ದನ್ನು ಪಡೆದು ಏನು ಕಾಣದಂತೆ ಸುಮ್ಮನಾಗುತ್ತಿದ್ದಾರೆ.ಪ್ರತಿಷ್ಟಿತ ಹೋಟೆಲ್ ಗಳಲ್ಲು ಸಹ ಅಪಾಯಕಾರಿ ರಸಾಯನಿಕ ಬಣ್ಣ ಬಳಕೆಯ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳಾಗಾಗಲಿ ನಗರಸಭೆಯ ಅಧಿಕಾರಿಗಳಾಗಲಿ ಯಾವುದೆ ನಿಯತವಾದ ಪರೀಶೀಲನೆ ನಡೆಸದೆ ನಾಗರೀಕರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಆಹಾರ ಪದಾರ್ಥಗಳನ್ನು ನೀಡುವ ವ್ಯಾಪಾರ ಮಾಡುವವರು ಆಹಾರ ಪರವಾನಿಗೆ ಪಡೆದು, ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಆಹಾರ ಪದಾರ್ಥಗಳ ಬೆಲೆ ಮತ್ತು ತೂಕವನ್ನು ಫಲಕಗಳ ಮೂಲಕ ಪ್ರಕಟಿಸಬೇಕು. ಇಲ್ಲವಾದಲ್ಲಿ ಆಹಾರ ಸುರಕ್ಷತಾ ಕಾಯ್ದೆ ೨೧ ಮತ್ತು ೬೩ರಂತೆ ದಂಡ ಅಥವಾ ಸೆರೆವಾಸ ಅನುಭವಿಸಬೇಕಾಗುತ್ತದೆ ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದ ಅಧಿಕಾರಿಗಳ ವಿರುದ್ದ ಹೋರಾಟ ರೂಪಿಸುವುದಾಗಿ ಅವರು ಎಚ್ಚರಿಸಿದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜೋಸೆಫ್ ರಾಮು, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಜಿಲ್ಲಾ ಸಂಚಾಲಕ ಸಲ್ಮಾನ್, ಕರವೇ(ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಅಶೋಕ್ ಇದ್ದರು.