ಇನ್ನುಮುಂದೆ ಹೊರಗುತ್ತಿಗೆ ಟೆಂಡರ್ 3 ವರ್ಷಕ್ಕೆ ವಿಸ್ತರಣೆ
ಬೆಂಗಳೂರು; ಜೂ:೫.ರಾಜ್ಯದ ವಿವಿದ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪಡೆಯುವ ಮಾನವ ಸಂಪನ್ಮೂಲ ಸೇವೆಯನ್ನು ಮೂರು ವರ್ಷಗಳ ಅವಧಿಗೆ ವಿಸ್ತರಿಸಿ ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
ಈವರೆಗೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಮಾನವ ಸಂಪನ್ಮೂಲವನ್ನು ಒಂದು ವರ್ಷದ ಅವಧಿಗೆ ಮಾತ್ರ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.ನಂತರದಲ್ಲಿ ಪ್ರತೀ ವರ್ಷ ಟೆಂಡರ್ ನಡೆಸಿ ಹೊರಗುತ್ತಿಗೆ ಆಧಾರದಲ್ಲಿ ಮಾನವ ಸಂಪನ್ಮೂಲ ಪಡೆಯಬೇಕಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಹೊರಗುತ್ತಿಗೆ ಟೆಂಡರ್ ಅವಧಿಯನ್ನು ಮೂರು ವರ್ಷಕ್ಕೆ ವಿಸ್ತರಿಸಿ ನಿರ್ಣಯ ಕೈಗೊಂಡಿದೆ.
ಇದರಿಂದಾಗಿ ರಾಜ್ಯದ ವಿವಿಧ ಇಲಾಖೆಗಳು ಮೂರು ವರ್ಷಕ್ಕೊಮ್ಮೆ ಟೆಂಡರ್ ನಡೆಸಿ ಹೊರಗುತ್ತಿಗೆ ಸೇವೆ ಪಡೆಯಬಹುದಾಗಿದೆ.
ಪರಿಣಾಮ ಏನು?:ಹೊರಗುತ್ತಿಗೆ ಟೆಂಡರ್ ಅವಧಿಯನ್ನು ಮೂರು ವರ್ಷಕ್ಕೆ ವಿಸ್ತರಿಸುವುದರಿಂದ ಗುತ್ತಿಗೆ ಏಜೆನ್ಸಿಗಳು ಹೊರಗುತ್ತಿಗೆ ನೌಕರರನ್ನು ಇನ್ನಷ್ಟು ಶೋಷಿಸಲು ಇದು ಅವಕಾಶ ಮಾಡಿಕೊಡಲಿದೆ.
ಒಂದು ವರ್ಷದ ಅವಧಿ ಟೆಂಡರ್ ಇದ್ದಾಗಲೆ ಹೊರಗುತ್ತಿಗೆ ನೌಕರರಿಗೆ ಕನಿಷ್ಟ ವೇತನ ಭವಿಷ್ಯ ನಿಧಿ ಪಾವತಿಸದೆ ಕಿರುಕುಳ ನೀಡುತ್ತಿದ್ದ ಏಜೆನ್ಸಿಗಳು ನಿರಂತರವಾಗಿ ಮೂರು ವರ್ಷ ಮುಂದುವರೆದಲ್ಲಿ ಕಾರ್ಮಿಕರು ಅನಿವಾರ್ಯವಾಗಿ ಏಜೆನ್ಸಿಗಳ ಕಿರುಕುಳಕ್ಕೆ ಬಲಿಯಾಗಲಿದ್ದಾರೆ.
ಗುತ್ತಿಗೆ ಏಜೆನ್ಸಿಗಳ ಲಾಭಿ ಒತ್ತಡಕ್ಕೆ ಮಣಿದಿರುವ ಸಿದ್ದರಾಮಯ್ಯ ಸರಕಾರ ಹೊರಗುತ್ತಿಗೆ ನೌಕರರ ಶೋಷಣೆಗೆ ಪರವಾನಗಿ ನೀಡಿದಂತಾಗಿದೆ ಎಂದು ಈ ತೀರ್ಮಾನವನ್ನು ವ್ಯಾಖ್ಯಾನಿಸಲಾಗಿದೆ