ದಾವಣಗೆರೆ:ಎ:೨೭. ದಾವಣಗೆರೆ ಮಹಾನಗರ ಪಾಲಿಕೆಯ 3ನೇ ವಲಯ ಕಚೇರಿಯ ತಮ್ಮ ಕೆಲಸಕ್ಕೆ ಖಾಸಗಿ ವ್ಯಕ್ತಿಯೊಬ್ಬರನ್ನು ನಿಯೋಜಿಸಿದ್ದ ಬಿಲ್ ಕಲೆಕ್ಟರ್ ನೇತ್ರಾವತಿ ಅವರನ್ನು ಅಮಾನತುಗೊಳಿಸಲು ಹಾಗೂ ನಕಲಿ ಸರ್ಕಾರಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ್ ವಿರುದ್ಧ ಎಫ್ಐಆರ್ ದಾಖಲಿಸಲು ಉಪಲೋಕಾಯುಕ್ತ ಬಿ.ವೀರಪ್ಪ ಸೂಚಿಸಿದ್ದಾರೆ.
ವಲಯ ಕಚೇರಿ ನೇತ್ರಾವತಿ ಅವರ ಕಡತಗಳನ್ನು ಬಸವರಾಜ್ ನಿರ್ವಹಿಸುತ್ತಿದ್ದರು. ಈ ಬಗ್ಗೆ ವಿಡಿಯೋ ಸಹಿತ ವ್ಯಕ್ತಿಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪಾಲಿಕೆ ಕಚೇರಿಗೆ ಭೇಟಿ ನೀಡಿದ್ದ ವೇಳೆ ಉಪಲೋಕಾಯುಕ್ತರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ವಿಡಿಯೋ ಸತ್ಯಾಸತ್ಯತೆ ತಿಳಿಯಲು ಪೊಲೀಸರಿಗೆ ಪತ್ರ ಬರೆಯಲಾಗಿದೆ ಎಂದು ಆಯುಕ್ತೆ ರೇಣುಕಾ ಹೇಳಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತ, ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಿ. ಸರ್ಕಾರಿ ನೌಕರರ ಹೆಸರಿನಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರು ಹಾಗೂ ಇತರೆ ನೌಕರರನ್ನು ಕಚೇರಿ ಉಪಯೋಗಕ್ಕೆ ಬಳಸಿಕೊಂಡು ಅಧಿಕಾರಿಗಳು ತಮ್ಮ ಬೇನಾಮಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆಂಬ ದೂರುಗಳು ವ್ಯಾಪಕವಾಗಿ ಸಲ್ಲಿಕೆಯಾಗುತ್ತಿರುವ ವೇಳೆಯಲ್ಲಿ ದಾವಣಗೆರೆ ಪಾಲಿಕೆಯಲ್ಲಿ ಖಾಸಗಿ ಕಲೆಕ್ಟರ್ ಕಂಡು ಬಂದಿರುವುದು ಎಲ್ಲರ ಹುಬ್ಬೇರಿಸಿದೆ.
ಎಫ್ ಸಿ ಇಲ್ಲದ ವಾಹನ ಜಪ್ತಿ
ಎಫ್ ಸಿ ಇಲ್ಲದ 115 ವಾಹನ ಜಪ್ತಿ
ಮಹಾನಗರ ಪಾಲಿಕೆಗೆ ಕಸ ಸಂಗ್ರಹ, ವಿಲೇವಾರಿ ಸೇರಿ 200ಕ್ಕೂ ಅಧಿಕ ವಾಹನ ಮಹಾನಗರ ಪಾಲಿಕೆಯಲ್ಲಿವೆ. ಇವುಗಳಲ್ಲಿ ಎಷ್ಟು ವಾಹನ ಯೋಗ್ಯತಾ ಪ್ರಮಾಣಪತ್ರ (ಫಿಟ್ನೆಸ್ ಸರ್ಟಿಫಿಕೇಟ್) ಹೊಂದಿವೆ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಆರ್ಟಿಒಗೆ ಉಪಲೋಕಾಯುಕ್ತ ಸೂಚಿಸಿದ್ದರು.ಮಹಾನಗರ ಪಾಲಿಕೆಯ 200 ವಾಹನಗಳಲ್ಲಿ 115 ವಾಹನಗಳು ಯೋಗ್ಯತಾ ಪ್ರಮಾಣ ಪತ್ರ ಹೊಂದಿಲ್ಲ ಎಂದು ಆರ್ಟಿಒ ವರದಿ ಸಲ್ಲಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ವೀರಪ್ಪ ಅವರು ಆ ಎಲ್ಲ ವಾಹನಗಳ ಜಪ್ತಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಮಂಜುನಾಥ್, ಲೋಕಾಯುಕ್ತ ಹೆಚ್ಚುವರಿ ನಿಬಂಧಕರಾದ ಕೆ.ಎಂ.ರಾಜಶೇಖರ್, ಅರವಿಂದ.ಎನ್.ವಿ, ವಿ.ಎನ್.ಮಿಲನಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಪೂರೆ ಇದ್ದರು.