ಹನೂರು: ತನ್ನ ಪ್ರಿಯಕರನ ಜೊತೆ ಸೇರಿ ಟಾಯ್ಲೆಟ್ ಗುಂಡಿಯಲ್ಲಿ ತನ್ನ ಗಂಡನ ಶವವನ್ನು ಹೂತು ಹಾಕಿದ್ದ ಪತ್ನಿ ಹಾಗೂ ಪ್ರಿಯಕರನಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿಸಿ ಶ್ರೀಕಾಂತ್ ರವರು ಜೀವಾವಧಿ ಶಿಕ್ಷೆ , 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಿಮಾಳ ಗ್ರಾಮದ ನಂದಿನಿ ಹಾಗೂ ಈತನ ಪ್ರಿಯಕರ ದಿನಕರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ.
ಘಟನೆ ವಿವರ: ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ರಾಜಶೇಖರ್ ಎಂಬುವರ ಪತ್ನಿ ನಂದಿನಿ ಪ್ರಿಯಕರ ದಿನಕರ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಈ ಸಂಬಂಧ ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಿದ್ದರು ಅಕ್ರಮ ಸಂಬಂಧ ಮುಂದುವರೆಸಿದ್ದರು.
2021 ಜೂನ್ 23 ರಂದು ರಾಜಶೇಖರ್ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನಂದಿನಿ ಹಾಗೂ ಈತನ ಪ್ರಿಯಕರ ದಿನಕರ ಮನೆಗೆ ಬಂದಿದ್ದಾನೆ. ಸ್ವಲ್ಪ ಸಮಯದ ನಂತರ ರಾಜಶೇಖರ್ ಮನೆಗೆ ಬಂದಾಗ ಇಬ್ಬರು ಜೊತೆಯಲ್ಲಿ ಇದ್ದದ್ದನ್ನು ನೋಡಿ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಪತ್ನಿ ನಂದಿನಿ ಹಾಗೂ ಪ್ರಿಯಕರ ದಿನಾಕರ್ ರಾಜಶೇಖರ್ ಗೆ ಕಣ್ಣಿಗೆ ಕಾರದಪುಡಿ ತಲೆಯ ಭಾಗಕ್ಕೆ ಹೊಡೆದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಇಬ್ಬರೂ ಸೇರಿ ಮನೆಯ ಹಿಂಭಾಗದಲ್ಲಿರುವ ಟಾಯ್ಲೆಟ್ ಗುಂಡಿಯಲ್ಲಿ ತಲೆಕೆಳಗಾಗಿ ತಕ್ಷಣಮುಚ್ಚಿದ್ದರು.
ಘಟನೆಯ ಸಂಬಂಧ ರಾಜಶೇಖರ್ ರವರ ತಂದೆಗೆ ಕೆಲಸಕ್ಕೆ ಹೋಗಿರುವುದಾಗಿ ನಂಬಿಸಿದ್ದರು ಇದಾದ ನಂತರ ಕೊಳೆತ ಶವ ವಾಸನೆ ಬಂದ ಹಿನ್ನೆಲೆ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಶವವನ್ನು ಹೊರ ತೆಗೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು . ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಆಗಿದ್ದ ಸಂತೋಷ್ ಕಶ್ಯಪ್ ರವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರರಾದ ಮಹದೇವಸ್ವಾಮಿ ಹಾಗೂ ಪ್ರತ್ಯಕ್ಷ ಸಾಕ್ಷಿ ರಂಜನ್ ಸಾಕ್ಷಿ ನೀಡಿದ್ದರು ಉಳಿದ ಸಾಕ್ಷಿದಾರರ ಹೇಳಿಕೆ ಮತ್ತು ಸನ್ನಿವೇಶಗಳ ಆದಾರದಲ್ಲಿ ಆರೋಪಿತರು ಎಸಗಿರುವ ಅಪರಾಧವನ್ನು ಸಾಬೀತು ಪಡಿಸಲಾಗಿದೆ.
ಈ ಹಿನ್ನೆಲೆ ಆರೋಪಿತರಾದ ನಂದಿನಿ ಹಾಗೂ ದಿನಕರ್ ವಿರುದ್ಧ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಲಾಗಿದೆ.
ವರದಿ :ವಿಜಯ್ ಕುಮಾರ್. ಕಾಂಚಳ್ಳಿ./ಹನೂರು.


