ಮಂಡ್ಯ: ‘ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಬಾರದು’ ಎಂದು ಆಗ್ರಹಿಸಿ ನಗರದ ಸರ್ಎಂ.ವಿ.ಪ್ರತಿಮೆ ಎದುರು ಎಸ್ಡಿಎಂಸಿ ಸಂಘ, ರೈತ ಸಂಘದ ಕಾರ್ಯಕರ್ತರು ಆರಂಭಿಸಿರುವ ಮೂರನೇ ದಿನದ ಉಪವಾಸ ಸತ್ಯಾಗ್ರಹವನ್ನು ಸೋಮವಾರ ಪಂಜಿನ ಮೆರವಣಿಗೆ ಮೂಲಕ ಮುಕ್ತಾಯಗೊಳಿಸಲಾಯಿತು.
‘ಶಾಲಾ ಶಿಕ್ಷಣ ಇಲಾಖೆಯ ಲೋಗೋ ಫಲಕವನ್ನು ಸುಟ್ಟು ಸತ್ಯಾಗ್ರಹ ಸ್ಥಳದಿಂದ ಜೆ.ಸಿ.ವೃತ್ತದವರೆಗೆ ಮೆರವಣಿಗೆ ನಡೆಸಿದ ಮುಖಂಡರು, ಉಪವಾಸ ಸತ್ಯಾಗ್ರಹ ಮುಕ್ತಾಯಗೊಳಿಸಿ, ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಡಿ.30ರ ಗಡುವು ನೀಡಿದರು.
‘ಮಾತು ತಪ್ಪಿದರೆ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸುವುದು ಹಾಗೂ ಒಂದು ಕೈಯಲ್ಲಿ ರಾಷ್ಟ್ರಧ್ವಜ, ಮತ್ತೊಂದು ಕೈಯಲ್ಲಿ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಲಾಗುವುದು’ ಎಂಬ ಎಚ್ಚರಿಕೆ ನೀಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ‘ಕೇರಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಾಗಬೇಕು. ಶಾಲೆಗಳನ್ನು ವಿಲೀನ ಅಥವಾ ಮಾರಾಟ ಮಾಡಬಾರದು, ಗುಣಾತ್ಮಕವಾಗಿ ಕಂಪ್ಯೂಟರೀಕರಣ ಸೇರಿದಂತೆ ಗುಣಮಟ್ಟದ ಶಿಕ್ಷಣ ನೀಡುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ರೈತ ಸಂಘ(ಮೂಲ ಸಂಘಟನೆ)ದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಬೇಡಿಕೆಯನ್ನು ಸರ್ಕಾರ ಈಡೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಶಿವಳ್ಳಿ ಚಂದ್ರು, ಸಂತೋಷ್ಗೌಡ, ರೇವಣ್ಣ, ಧನುಷ್ಗೌಡ, ಎಂ.ಬಿ.ನಾಗಣ್ಣಗೌಡ, ಪೂರ್ಣಿಮಾ, ಫಯಾಜ್, ಅನಿಲ್ಗೌಡ, ಜವರೇಗೌಡ, ಚನ್ನಬಸಪ್ಪ ಮೈಸೂರು ಭಾಗವಹಿಸಿದ್ದರು.


