ಮಂಡ್ಯ: ೫೬ ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸುವಂತೆ ಆಗ್ರಹಿಸಿ ಮಾ.೧೨ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಒಳ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ಪಾಪಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಪಡೆದು ಅನುಮೋದನೆ ದೊರೆತಿದೆ. ಈ ವೇಳೆ ೫೬ ಸಾವಿರ ಹುದ್ದೆಗಳನ್ನು ಹಿಂದಿನ ಮೀಸಲಾತಿಯಂತೆ ಭರ್ತಿ ಮಾಡುವ ಸಂಪುಟ ಸಭೆಯ ತೀರ್ಮಾನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹ ಎಂದು ಖಂಡಿಸಿದರು.
ಸರಕಾರ ಬಂದ ಮೊದಲ ಅಧಿವೇಶನದಲ್ಲೇ ಒಳಮೀಸಲಾತಿಯ ಭರವಸೆ ನೀಡಿದ ಕಾಂಗ್ರೆಸ್ ಚಿತ್ರದುರ್ಗದ ಸಮಾವೇಶದಲ್ಲಿಯೂ ಅದೇ ಭರವಸೆ ನೀಡಿ ಎರಡು ವರ್ಷ ಕಳೆದರೂ ಒಳಮೀಸಲಾತಿ ಜಾರಿಯ ಪ್ರಯತ್ನವನ್ನೂ ಮಾಡಿರಲಿಲ್ಲ. ಅಂತಿಮವಾಗಿ ಸುಪ್ರೀಂ ತೀರ್ಪಿನ ನಂತರದ ಹೋರಾಟಕ್ಕೆ ಮಣಿದ ರಾಜ್ಯದ ಕಾಂಗ್ರೆಸ್ ಸರಕಾರ ಒಳಮೀಸಲಾತಿ ಜಾರಿಗೆ ಅಂಕಿತ ಪಡೆದಿದೆ ಎಂದು ಹೇಳಿದರು.
ಇದೀಗ ೫೬, ೪೩೨ ಹುದ್ದೆಗಳ ಭರ್ತಿಗೆ ಮುಂದಾಗಿರುವ ಸರಕಾರ ಎಸ್ಸಿ,ಎಸ್ಟಿ ಸಮುದಾಯಕ್ಕೆ ಸಿಗಬೇಕಾದ ೩,೩೮೭ಕ್ಕೂ ಹೆಚ್ಚಿನ ಹುದ್ದೆಗಳನ್ನು ತಪ್ಪಿಸಿ ಪರಿಶಿಷ್ಟ ಸಮುದಾಯದ ವಿರೋಧಿ ನೀತಿ ಅನುಸರಿಸುತ್ತಿದೆ.
ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಸಚಿವರೇ ಒಳಮೀಸಲಾತಿಗೆ ಅಡ್ಡಲಾಗಿ ನಿಂತಿದ್ದಾರೆ. ಸಾಮಾಜಿಕ ನ್ಯಾಯ ಒದಗಿಸುವ ಬದಲು ಪಕ್ಷಪಾತೀತವಾಗಿ ಸರಕಾರ ನಡೆದುಕೊಳ್ಳುತ್ತಿದೆ. ಇದನ್ನು ಸಹಿಸದೇ ಪ್ರಜ್ಞಾವಂತ ಸಮುದಾಯ ಮಾ.೧೨ರಂದು ಸರಕಾರಕ್ಕೆ ಬುದ್ದಿ ಕಲಿಸಲು ಮುಂದಾಗಿದೆ ಎಂದು ಹೇಳಿದರು.
ಈ ಕೂಡಲೇ ಒಳಮೀಸಲಾತಿ ಸಂಬಂಧ ಫೆ.೨೭ರಂದು ಹೊರಡಿಸಿರುವ ಸಚಿವ ಸಂಪುಟ ನಿರ್ಧಾರದ ಆದೇಶ ಹಿಂಪಡೆಯಬೇಕು. ರಾಜ್ಯದ ಶೇ.೫೬ರ ಮೀಸಲಾತಿ ಸಂರಕ್ಷಣೆಗಾಗಿ ಸರ್ವಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರಕಾರಕೆ ಮನವಿ ಮಾಡಿ ಸಂವಿಧಾನ ೯ನೇ ಅನುಸೂಚಿಯಲ್ಲಿ ಸೇರಿಸಲು ಕ್ರಮವಹಿಸಬೇಕು. ಈ ನಿಯಮವನ್ನು ೨೦೦೧ರ ನಂತರ ನೇರ ನೇಮಕಾತಿ, ಬಡ್ತಿ ನೇಮಕಾತಿ, ಮುಂಬಡ್ತಿ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ಮುಂದುವರೆಸಬೇಕು.
ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಒಳಮೀಸಲಾತಿ ಸಂಪೂರ್ಣ ಜಾರಿಯಾಗಬೇಖು. ವಿಶ್ವವಿದ್ಯಾಲಯಗಳು ನೇಮಕಾತಿಯ ಒಂದು ಘಟಕ ಎಂದು ಪರಿಗಣಿಸಬೇಕು. ಅಲೆಮಾರಿ ಸಮುದಾಯಗಳಿಗೆ ಶೇ.೧ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸದೇ ಪಕ್ಷಪಾತೀಯವಾಗಿ ನಡೆದುಕೊಳ್ಳುತ್ತಿರುವ ಸಚಿವರನ್ನು ಕೂಡಲೆ ಬದಲಾಯಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎನ್.ಆರ್.ಚಂದ್ರಶೇಖರ್, ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಎನ್.ಕಾಂತರಾಜು, ಮುಖಂಡರಾದ ಬಿ.ಕೃಷ್ಣ,ಸಿ.ಕೆಂಪಯ್ಯ, ಅಂಬುಜಿ ಇದ್ದರು.


