ಅವಧಿ ಮೀರಿದ ಬೀಜ ವಿತರಣೆಗೆ ತಡೆಯೊಡ್ಡಿದ ಕರವೇ
ರೈತರಿಗೆ ಅವಧಿ ಮೀರಿದ ಬಿತ್ತನೆ ಬೀಜ ವಿತರಿಸುವುದನ್ನು ಪತ್ತೆಹಚ್ಚಿ ಕರವೇ ಕಾರ್ಯಕರ್ತರು ತಡೆಹಿಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗುತಿತ್ತು.
ಈ ಸಂಧರ್ಭದಲ್ಲಿ ಬಿತ್ತನೆ ಬೀಜ ಒಂದು ವರ್ಷಕ್ಕು ಹಿಂದೆಯೆ ಅವಧಿ ಮೀರಿರುವುದು ರೈತರ ಗಮನಕ್ಕೆ ಬಂದಿದೆ.ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿ ಅವಧಿ ಮೀರಿದ ಬಿತ್ತನೆ ಬೀಜ ಪಡೆಯಲು ನಿರಾಕರಿಸಿದ್ದಾರೆ.ಆದಾಗ್ಯೂ ಬಿತ್ತನೆ ಬೀಜ ವಿತರಣೆ ಮುಂದುವರಿಸಲಾಗಿದೆ.ಬೇಸತ್ತ ರೈತರು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂಗೆ ಮಾಹಿತಿ ಮುಟ್ಟಿಸಿದ್ದಾರೆ.ಸ್ಥಳಕ್ಕೆ ಧಾವಿಸಿದ ಕರವೇ ಕಾರ್ಯಕರ್ತರು ಅವಧಿ ಮೀರಿದ ಬಿತ್ತನೆ ಬೀಜ ವಿತರಣೆಗೆ ತಡೆಯೊಡ್ಡಿದ್ದಾರೆ.
ಅಧಿಕಾರಿಗಳು ತಕ್ಷಣ ಬಿತ್ತನೆ ಬೀಜ ವಿತರಣೆ ಸ್ಥಗಿತಗೊಳಿಸಿದ್ದಾರೆ.ಈ ಸಂಧರ್ಭದಲ್ಲಿ ಮಾತನಾಡಿದ ಜಯರಾಂ ಸುಮಾರು ೨೪೦ ಕೆಜಿಯಷ್ಟು ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಸಿದ್ದ ಮಾಡಿಕೊಂಡಿತ್ತು. ಅವಧಿ ಮೀರಿದ ಬೀಜ ವಿತರಣೆಯಾಗಿದ್ದರೆ ನೂರಾರು ಎಕರೆ ಫಸಲು ನಷ್ಟದ ಜತೆಗೆ ರೈತರ ಶ್ರಮ ಬಂಡವಾಳ ಎಲ್ಲವು ನಷ್ಟವಾಗುತಿತ್ತು.ಸಂಘಟನೆಯ ಮಧ್ಯ ಪ್ರವೇಶದಿಂದ ರೈತರಿಗಾಗುತ್ತಿದ್ದ ಸಂಭಾವ್ಯ ನಷ್ಟ ತಡೆಯಲಾಗಿದೆ.ಅವಧಿ ಮೀರಿದ ಬಿತ್ತನೆ ಬೀಜ ಯಾವ ಮೂಲದಿಂದ ಖರೀದಿಸಲಾಗಿದೆ ಎಂಬುದು ಪತ್ತೆಯಾಗಬೇಕಿದೆ.೪ ಜಿ ರಿಯಾಯಿತಿ ಮೂಲಕ ರಾಜ್ಯದ ರೈತ ಸಂಪರ್ಕ ಕೇಂದ್ರಗಳಿಗೆ ಅವಧಿ ಮೀರಿದ ಕಳಪೆ ಬಿತ್ತನೆ ಬೀಜಗಳನ್ನು ಖಾಸಗಿ ಬೀಜ ಕಂಪನಿಯಿಂದ ಪೂರೈಸಲಾಗಿದೆ.ಇದು ರಾಜ್ಯವ್ಯಾಪಿ ನಡೆದಿರುವ ಬೀಜ ಹಗರಣವಾಗಿದೆ ಈ ಸಂಬಂದ ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ದ ಅಗತ್ಯ ತನಿಖೆ ನಡೆಸುವಂತೆ ಕೃಷಿ ಸಚಿವ ಚಲುವರಾಯಸ್ವಾಮಿಯವರನ್ನು ಆಗ್ರಹಿಸಿದ್ದಾರೆ.


