ಮಂಡ್ಯ: ಮೆಡಿಕಲ್ ಕಾಲೇಜಿನಲ್ಲಿ ಭ್ರಷ್ಟಾಚಾರ ಎಸಗಿರುವ ಪ್ರಭಾರ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಅವರಿಗೆ ಉತ್ತಮ ಸೇವಕ ಪ್ರಶಸ್ತಿ ನೀಡುವುದು ಖಂಡನಾರ್ಹವಾಗಿದ್ದು.ಪ್ರಶಸ್ತಿಯನ್ನು ಹಿಂಪಡೆಯುವಂತೆ ಆರ್ ಟಿ ಐ ಕಾರ್ಯಕರ್ತ ಎಚ್ ಎಸ್ ಸಾಗರ್ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ. ಅವರು ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ನರಸಿಂಹ ಮೂರ್ತಿ ಒದಗಿಸಿರುವ ಸೇವೆ ಸಂಬಂಧ ಶ್ವೇತಪತ್ರ ಹೊರಡಿಸಬೇಕು. ಮಿಮ್ಸ್ ಪ್ರಭಾರ ನಿರ್ದೇಶಕರಾಗಿ ಆಸ್ಪತ್ರೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಹಣ ದುರ್ಬಳಕೆ ಹಾಗೂ ಕರ್ತವ್ಯ ಲೋಪ ಎಸಗಿದ್ದಾರೆ.
ಇದರಲ್ಲಿ ಮಿಮ್ಸ್ ಆಡಳಿತ ಮಂಡಳಿಯ ಕಚೇರಿ ಅಧೀಕ್ಷಕ ಬಿ.ಕೆ.ಚಂದ್ರಶೇಖರ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಆಸ್ಪತ್ರೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 20ಕ್ಕೂ ಹೆಚ್ಚು ಲೋಕಾಯುಕ್ತ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 9 ಗಂಭೀರ ಪ್ರಕರಣಗಳನ್ನು ದಾಖಲೆ ಸಹಿತ ಸಲ್ಲಿಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ ಸಂದರ್ಭದಲ್ಲಿ ವಾರ್ಡ್ಗಳಲ್ಲಿ ಅವಧಿ ಮುಗಿದ ಮಾತ್ರೆಗಳು, ಕಲುಷಿತ ನೀರು, ಹುಳು ಬಿದ್ದ ಬ್ರೆಡ್ ಹಾಗೂ ಬನ್ ಪತ್ತೆಯಾಗಿದ್ದವು ಎಂದು ಹೇಳಿದರು.
ಬಿಲ್ಲಿಂಗ್ ಕೌಂಟರ್ನಲ್ಲಿ ರೂ.1.50 ಲಕ್ಷ ನಗದು ಕಳುವಾಗಿದ್ದರೂ ಸಿಸಿಟಿವಿ ದೃಶ್ಯಾವಳಿ ಇದ್ದರೂ ಕಳ್ಳರನ್ನು ಹಿಡಿಯದೆ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕೆಟಿಪಿಪಿ 4ಜಿ ವಿನಾಯಿತಿ ಅಡಿಯಲ್ಲಿ ನಿಯಮಬಾಹಿರವಾಗಿ ನಿಯಮ ಉಲ್ಲಂಘಿಸಿ ರೂ.7.50 ಲಕ್ಷ ಹಾಗೂ ಬೃಹತ್ ಮೊತ್ತದ ಔಷಧಿ ಖರೀದಿಯಲ್ಲಿ ಕಮಿಷನ್ ದಂಧೆ ನಡೆದಿದೆ. ರೂ7.65 ಲಕ್ಷ ವೆಚ್ಚದಲ್ಲಿ ನರ್ಸಗಳ ಕ್ಯಾಂಟೀನ್ ನಿರ್ಮಿಸಿ 3 ವರ್ಷಗಳಾದರೂ ಬಳಕೆಗೆ ನೀಡಿಲ್ಲ.
ರೂ13 ಕೋಟಿ ಅಂದಾಜು ವೆಚ್ಚದ ಕ್ಯಾನ್ಸರ್ ಆಸ್ಪತ್ರೆ ಕಟ್ಟಡದ ವೆಚ್ಚವನ್ನು ರೂ20 ಕೋಟಿಗೆ ಏರಿಸಿದ್ದರೂ 10 ವರ್ಷಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಿದರು.
ಹೀಗೆ ನಾನಾ ಆರೋಪಗಳು ಇವರ ಮೇಲಿದ್ದು, ಇವರಿಗೆ ನೀಡಲಾಗುವ ಉತ್ತಮ ಆಡಳಿತಗಾರ ಪ್ರಶಸ್ತಿಯನ್ನು ಹಿಂಪಡೆಯಬೇಕು. ಬೇರೆಡೆಗೆ ಇವರನ್ನು ವರ್ಗಾಯಿಸಿ ಭ್ರಷ್ಟಾಚಾರ ಸಂಬಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ಮಂಡ್ಯ ತಾಲೂಕು ಅಧ್ಯಕ್ಷ ಎಂ.ಎಸ್.ಅಣ್ಣಯ್ಯ, ಚಲುವೇಗೌಡ, ಜಯರಾಂ ಇದ್ದರು.


