ಮಂಡ್ಯ: ಅಟ್ರಾಸಿಟಿ ಪ್ರಕರಣದ ಸಂತ್ರಸ್ತರಿಂದ ಹಣ ಲಪಟಾಯಿಸುವ ಜಿಲ್ಲಾ ಎಸ್ಸಿಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಶಿವರಾಜ್ ಮರಳಿಗ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎಸ್ಸಿಎಸ್ಟಿ ದೌರ್ಜನ್ಯ ಪ್ರಕರಣವೊಂದರಲ್ಲಿ ಸಂತ್ರಸ್ಥರಿಂದ ಸರಕಾರದಿಂದ ಸಿಗುವ ಪರಿಹಾರದ ಹಣ ಲಪಟಾಯಿಸಲು ಜಿಲ್ಲಾ ಎಸ್ಸಿಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಬಿ.ಆನಂದ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ. ಕಚೇರಿಯ ಎಫ್ಡಿಎ ಅಧಿಕಾರಿ ನವೀನ್ ಹುನ್ನಾರ ಹೆಣೆದಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ಬಿ.ಆನಂದ ಹಾಗೂ ಸಂತ್ರಸ್ತರ ನಡುವಿನ ಸಂಭಾಷಣೆಯ ದಾಖಲೆ ಕಲೆ ಹಾಕಲಾಗಿದೆ. ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಜಿಲ್ಲಾ ಎಸ್ಸಿಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಸ್ಥಾನದಲ್ಲಿ ಬಿ.ಆನಂದ್ ಅವರನ್ನು ಕೈಬಿಡಬೇಕು. ಎಫ್ಡಿಎ ಅಧಿಕಾರಿ ನವೀನ್ ಅವರನ್ನು ಸೇವೆಯಿಂದ ಅಮಾನತು ಮಾಡಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಎಸ್.ಪಿ.ಅಂದಾನಯ್ಯ, ಎಂ.ಕುಮಾರ, ವಿ.ಸಂತೋಷ್ ಇದ್ದರು.


